ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ೨೧೦ಕ್ಕಿಂತ ಹೆಚ್ಚು ಮಂದಿರಗಳನ್ನು ಜೀರ್ಣೋದ್ದಾರ ಮಾಡಲಾಗಿದ್ದು, ಜಾತಿ, ಪಕ್ಷ ಭೇದವಿಲ್ಲದೆ ಪ್ರತಿ ಗ್ರಾಮದಲ್ಲಿ ಮಂದಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮಚ್ಛೆ ಗ್ರಾಮದ ಶ್ರೀ ಬ್ರಹ್ಮಲಿಂಗ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಡಿಗಲ್ಲು ಪೂಜೆ ನೆರವೇರಿಸಿ, ಕಟ್ಟಡ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಭಾರತ ದೇವರುಗಳ ದೇಶ, ಸಂಸ್ಕೃತಿಯ ದೇಶ.
ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ಮಂದಿರ ನಿರ್ಮಾಣ ನಡೆಯುತ್ತಿದೆ ಎಂದರು.

ದೇವಸ್ಥಾನಕ್ಕೆ ಗ್ರಾಮಸ್ಥರ ಬೇಡಿಕೆಯಂತೆ ಒಂದು ಕೋಟಿ ರೂಪಾಯಿ ಮಂಜೂರು ಮಾಡಿಸುತ್ತೇನೆ. ಮೊದಲ ಹಂತದಲ್ಲಿ 50 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಮೂಲಸೌಕರ್ಯಗಳ ಜೊತೆಗೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೂ ಆದ್ಯತೆ ನೀಡುತ್ತಿರುವೆ. ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳುವೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡೋಣ ಎಂದರು.
ಇದೇ ವೇಳೆ ವಿವಿಧ ಸಂಘಟನೆಗಳಿಂದ ಸಚಿವರನ್ನು ಸನ್ಮಾನಿಸಲಾಯಿತು.

ಯುವರಾಜ ಕದಂ, ದೇವಸ್ಥಾನ ಕಮೀಟಿಯ ಅಧ್ಯಕ್ಷ ಚಾಂಗಪ್ಪ ಹವಳ, ಸುರೇಶ ಲಾಡ, ಸಂಜು ಸುಳಗೇಕರ್, ಶಂಕರ ಬೆಳಗಾಂವ್ಕರ್, ಬಸವಂತ ನಾವಗೆಕರ್, ಪಿಂಟು ಬೆಳಗಾಂವ್ಕರ್, ನಾಗೇಶ ಗುಂಡೂಳ್ಕರ್, ಕಸ್ತೂರಿ ಕೋಲಕಾರ್, ಕುಶಪ್ಪ, ಯಲ್ಲಪ್ಪ ಬೆಳಗಾಂವ್ಕರ್, ಮನೋಹರ್ ಬಾಂಡಗೆ, ಸುಧೀರ ದೇಸಾಯಿ, ಶಿವಾಜಿ ಚೌಗುಲೆ, ನಾಗರಾಜ ತಳವಾರ ಉಪಸ್ಥಿತರಿದ್ದರು.

ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ಪಂತ ಮಹಾರಾಜರ ಪುಣ್ಯತಿಥಿ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.