ಘಟಪ್ರಭಾ: ಹುಬ್ಬಳ್ಳಿ-ದಾದರ ಎಕ್ಸ್ಪ್ರೆಸ್ (17317/17318) ರೈಲನ್ನು ಮಾರ್ಚ್ 6 ರಿಂದ ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆಯನ್ನು ಮುಂದಿನ ಆದೇಶದವರೆಗೆ ಮುಂದುವರೆಸಲು ನೈರುತ್ಯ ರೈಲ್ವೆ ವಲಯ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯಸಭಾ ಸಂಸದ ಹಾಗೂ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಲಹಾ ಮಂಡಳಿ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.

ಸೋಮವಾರ ಮಾರ್ಚ್ 04 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ತಿರುಪತಿ-ಕೊಲ್ಲಾಪುರ ಎಕ್ಸ್ಪ್ರೆಸ್ (17415/17416) ರೈಲನ್ನು ಉಗಾರ ಖುರ್ದ ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆಯನ್ನು ಮುಂದುವರೆಸಲಾಗಿದೆ. ನನ್ನ ಮನವಿಗೆ ಸ್ಪಂದಿಸಿ ಚಿಕ್ಕೋಡಿ ರೋಡ್ ಮತ್ತು ಉಗಾರ ಖುರ್ದ ರೈಲ್ವೆ ನಿಲ್ದಾಣಗಳಲ್ಲಿ ಒಂದು ನಿಮಿಷದ ನಿಲುಗಡೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ ನೈರುತ್ಯ ರೈಲ್ವೆ ಇಲಾಖೆ ಧನ್ಯವಾದಗಳು.
ಇದರಿಂದ ಈ ಭಾಗದ ಜನರಿಗೆ ತಿರುಪತಿ ದರ್ಶನಕ್ಕೆ ಹಾಗೂ ಬೆಳಗಾವಿ, ಮುಂಬೈಗೆ ಹೋಗಲು ಬಹಳ ಅನುಕೂಲವಾಗಲಿದೆ. ಈ ಭಾಗದ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.