ಬೆಳಗಾವಿ: ಮೃಣಾಲ ಹೆಬ್ಬಾಳಕರ್ ಅತ್ಯಂತ ಕ್ರಿಯಾಶೀಲ ಯುವಕನಾಗಿದ್ದು, ಲೋಕಸಭೆಗೆ ಹೋದಲ್ಲಿ ಜಿಲ್ಲೆಗೆ ಅನ್ಯಾಯವಾಗುವುದನ್ನು ತಡೆಯುವ ಸಾಮರ್ಥ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿಯ ಅನಗೊಳದಲ್ಲಿ ಲೋಕಸಭೆ ಚುನಾವಣೆಯ ಪ್ರಚಾತ ಕೈಗೊಂಡು ಮಾತನಾಡಿದ ಅವರು, ವಿದ್ಯಾವಂತ, ಎಲ್ಲ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ನಮ್ಮನ್ನು ಪ್ರತಿನಿದಿಸುವ ಸಮರ್ಥ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್. ಅವರನ್ನು ಆಯ್ಕೆ ಮಾಡಿದರೆ ಕೇವಲ ಒಂದೇ ವರ್ಷದಲ್ಲಿ ನಮ್ಮ ಮತ ಸಾರ್ಥಕವಾಯಿತು ಎನ್ನುವ ಭಾವನೆ ಬರುವಂತೆ ಕೆಲಸ ಮಾಡುತ್ತಾನೆ ಎಂದು ಅವರು ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನ ಸಭಾ ಕ್ಷೇತ್ರಗಳಿಂದಲೂ ಕಾಂಗ್ರೆಸ್ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತ್ಯಧಿಕ ಮುನ್ನಡೆ ಸಾಧಿಸಲಿದೆ. ಬಿಜೆಪಿ ಅಭ್ಯರ್ಥಿ ಕುರಿತು ಅವರ ಪಕ್ಷದಲ್ಲೇ ದೊಡ್ಡ ಮಟ್ಟದ ಅಸಮಾಧಾನವಿದೆ. ಕೆಲವು ಮುಖಂಡರು ಕಾಟಾಚಾರಕ್ಕೆನ್ನುವಂತೆ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಜಗದೀಶ್ ಶೆಟ್ಟರ್ ಗೆ ಮತ ಹಾಕಲು ಜಿಲ್ಲೆಯ ಸ್ವಾಭಿಮಾನಿ ಜನರ ಮನಸ್ಸು ಒಪ್ಪುವುದಿಲ್ಲ. ಅವರು ಜಿಲ್ಲೆಗೆ ಮಾಡಿರುವ ಅನ್ಯಾಯವನ್ನು ನೋಡಿಯೂ ಮತ ಹಾಕಿದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತದೆ ಎಂದು ಚನ್ನರಾಜ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.