
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಪಂದ್ಯ ಗೆದ್ದು ಟ್ರೋಫಿ ಪಡೆದ ಭಾರತಕ್ಕೆ ₹20 ಕೋಟಿ ನಗದು (2.24 ಮಿಲಿಯನ್ ಡಾಲರ್) ಬಹುಮಾನ ದೊರೆತಿದೆ.
2025ರ ಐಪಿಎಲ್ಗಾಗಿ ನಡೆದ ಹರಾಜಿನಲ್ಲಿ ರಿಷಭ್ ಪಂತ್ ಪಡೆದ ಸಂಭಾವನೆಗಿಂತ ಈ ಹಣ ಕಡಿಮೆಯಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿರುವ ಪಂತ್ ₹27 ಕೋಟಿ ಪಡೆದಿದ್ದಾರೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.
ಮತ್ತೊಂದೆಡೆ, ಪಂದ್ಯದಲ್ಲಿ ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಕ್ಕೆ ₹9.72 ಕೋಟಿ ರೂ. (1.12 ಮಿಲಿಯನ್ ಡಾಲರ್) ಬಹುಮಾನ ನೀಡಲಾಗಿದೆ.
ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಎದುರಾದ
ಸೋಲುಗಳಿಂದ ಪಾಠ ಕಲಿತಿದ್ದೇವೆ. ಅದರಿಂದಾಗಿಯೇ 12 ತಿಂಗಳ ಅವಧಿಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಎಂದು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.
2024ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾ, ಇದೀಗ (ಭಾನುವಾರ, ಮಾರ್ಚ್ 10) ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ನ್ಯೂಜಿಲೆಂಡ್ ಎದುರಿನ ಫೈನಲ್ ಪಂದ್ಯ ಗೆದ್ದ ನಂತರ ಮಾತನಾಡಿರುವ ಕೊಹ್ಲಿ, ‘ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದು ತುಂಬಾ ದಿನಗಳಾಗಿದ್ದವು. ಹಾಗಾಗಿ, ಟ್ರೋಪಿ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಆಸ್ಟ್ರೇಲಿಯಾದಲ್ಲಿನ ಕಠಿಣ ಪ್ರವಾಸ ಮುಗಿಸಿ ಇಲ್ಲಿಗೆ ಬಂದು ದೊಡ್ಡ ಪಂದ್ಯಾವಳಿಯನ್ನು ಗೆದ್ದಿದ್ದೇವೆ. ಈ ಜಯ, ಒಂದು ತಂಡವಾಗಿ ನಮ್ಮ ಆತ್ಮವಿಶ್ವಾಸವನ್ನು ಮತ್ತೊಮ್ಮೆ ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.
‘ಟೂರ್ನಿಯುದ್ದಕ್ಕೂ ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮುಂದೆ ನಿಂತು ಆಡಿದರು. ಹಿಂದಿನ ಟೂರ್ನಿಗಳಲ್ಲಿ ನಾವು ನಿರ್ಣಾಯಕ ಪಂದ್ಯಗಳನ್ನು ಗೆಲ್ಲಲು, ಒತ್ತಡವನ್ನು ಮೀರಿ ಆಡಲು ವಿಫಲವಾಗುತ್ತಿದ್ದೆವು. ಆದರೆ, ಅಂತಹ ಅನುಭವಗಳಿಂದ ಈ ಬಾರಿ ಪಾಠ ಕಲಿತಿದ್ದೇವೆ’ ಎಂದಿದ್ದಾರೆ.
ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅವರ ಅನುಭವದ ಆಟದ ಬಗ್ಗೆ ಮಾತನಾಡಿದ ಕೊಹ್ಲಿ, ‘ಆ ಕಾರಣಕ್ಕಾಗಿಯೇ ಅನುಭವಿಗಳಿಗೆ ಮಣೆಹಾಕಬೇಕಾಗುತ್ತದೆ. ಅವು, ಇಂತಹ (ಒತ್ತಡದ) ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಹೊಂದಿರುತ್ತಾರೆ. ಅದರಿಂದ ಕಲಿತ ಪಾಠವನ್ನು ಅಳವಡಿಸಿಕೊಂಡು, ಕಷ್ಟಪಟ್ಟು ಆಡಿದರೆ, ಅವಕಾಶಗಳು ಸೃಷ್ಟಿಯಾಗುತ್ತವೆ. ರಾಹುಲ್, ಕಳೆದ ಎರಡು ಪಂದ್ಯಗಳನ್ನು ಗೆದ್ದುಕೊಟ್ಟ ರೀತಿಯೇ ಅಂತಹ ಅನುಭವಕ್ಕೆ ಸಾಕ್ಷಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಐಸಿಸಿಯ ನಾಲ್ಕು ಟ್ರೋಫಿಗಳನ್ನು ಗೆದ್ದಿರುವುದು ನಿಜವಾಗಿಯೂ ಆಶೀರ್ವಾದದ ಫಲ. ಇಷ್ಟು ದೀರ್ಘಕಾಲ ಆಡಿದ್ದು ಮತ್ತು ಇಷ್ಟೆಲ್ಲ ಸಾಧಿಸಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ’ ಎಂದೂ ಹೇಳಿಕೊಂಡಿದ್ದಾರೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ, 2024ರ ಟಿ20 ವಿಶ್ವಕಪ್ ವಿಶ್ವಕಪ್ ಗೆಲ್ಲುವುದಕ್ಕೂ ಮುನ್ನ, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ, ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಅರ್ಧಶತ ಸಿಡಿಸಿ ಮಿಂಚಿದರು. ಐದು ಪಂದ್ಯಗಳಲ್ಲಿ 218 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಆಟಗಾರ ಹಾಗೂ ಒಟ್ಟಾರೆ 5ನೇ ಬ್ಯಾಟರ್ ಎನಿಸಿಕೊಂಡರು.
ಭಾರತಕ್ಕೆ ಜಯ:
ಪಾಕಿಸ್ತಾನದ ಆತಿಥ್ಯದಲ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೊಂಡಿತ್ತು. ಆದರೆ, ರಾಜತಾಂತ್ರಿಕ ಕಾರಣಗಳಿಂದಾಗಿ ಪಾಕ್ಗೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದ ಭಾರತ ತಂಡ, ತನ್ನ ಪಾಲಿನ ಪಂದ್ಯಗಳನ್ನು ತಟಸ್ಥ ಸ್ಥಳವಾದ ದುಬೈನಲ್ಲಿ ಆಡಿತ್ತು.
ರಾತ್ರಿ ನಡೆದ ಫೈನಲ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 251 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ಗೆ 254 ರನ್ ಗಳಿಸಿ ಜಯದ ನಗೆ ಬೀರಿತು.