ಗೃಹೋಪಯೋಗಿ ಅನಿಲ ಸಂಪರ್ಕ ಹೊಂದಿರುವವರು ಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿ ನಂಬಿದ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ.

ಬೆಳಗ್ಗೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಜನರ ದಂಡೇ ನೆರೆದಿದೆ. ಎಲ್ಲರೂ ಆಧಾರ್ ಕಾರ್ಡ್‌ಗಳೊಂದಿಗೆ ಧಾವಿಸುತ್ತಾರೆ. ಕೆವೈಸಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿಲ್ಲಿಸಲಾಗುತ್ತದೆ. ಜೊತೆಗೆ ಈ ಸಂಪರ್ಕವನ್ನು ವಾಣಿಜ್ಯ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಕಳೆದ ವಾರವೂ ಇದೇ ರೀತಿಯ ಸುದ್ದಿ ಹರಡಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ನೆರೆದಿದ್ದರು.

ಈ ವಾರವೂ ಏಜೆನ್ಸಿಗಳ ಎದುರು ಜಮಾಯಿಸಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ಕೆಲವು ಗ್ಯಾಸ್ ಏಜೆನ್ಸಿಗಳು ಕಂಗಾಲಾಗಿದ್ದವು. ಈ ಸಂಬಂಧ ಪೂರಕ ಸಿದ್ಧತೆ ಮಾಡಿಕೊಳ್ಳದೇ ಇದ್ದುದರಿಂದ ಪರದಾಡುವಂತಾಯಿತು.

ಈ ಸಂಬಂಧ ಮಾಹಿತಿ ನೀಡಿ, ಕೆವೈಸಿ ಮಾಡಿಸದಿದ್ದರೆ ಸಂಪರ್ಕ ರದ್ದಾಗುತ್ತದೆ ಎಂದಾಗಲಿ, ವಾಣಿಜ್ಯ ಸಂಪರ್ಕಕ್ಕೆ ಸಂಪರ್ಕ ಬದಲಾಗುತ್ತದೆ ಎಂಬುದೆಲ್ಲ ಸುಳ್ಳು ಸುದ್ದಿ. ಈ ರೀತಿಯ ಯಾವ ಆದೇಶವೂ ನಮಗೆ ಬಂದಿಲ್ಲ. ಆದರೆ ಕೆವೈಸಿ ಮಾಡಿಸುವುದು ಒಳ್ಳೆಯದು. ಇದರಿಂದ ಮುಂದಿನ ದಿನಗಳ ದಾಖಲಾತಿ ಸಂಗ್ರಹವಾದಂತಾಗುತ್ತದೆ. ಜೊತೆಗೆ ನಕಲಿ ಸಂಪರ್ಕಗಳು, ಇದ್ದರೆ ಅವೆಲ್ಲ ಸಹಜವಾಗಿಯೇ ರದ್ದಾಗುವಂತಾಗುತ್ತದೆ ಎಂದ ಅವರು, ಆಗಮಿಸಿದ್ದ ಎಲ್ಲರಿಗೂ ಕೆವೈಸಿ ಮಾಡಿಕೊಡಲಾಗುತ್ತಿದೆ.

ಕೊನೆಗೂ ಸ್ಪಷ್ಟನೆ :
ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಆಧಾರ್ ದೃಢೀಕರಣ ಕಡ್ಡಾಯ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಂದ ಗ್ಯಾಸ್ ಬಳಕೆದಾರರು ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.