ಕಾರವಾರ: ಮಂಗಳೂರಿನ ಪತ್ರಕರ್ತರು ವೃದ್ದೆಯ ಶವ ಹೊತ್ತುಕೊಂಡು ಸಾಗಿ ಮನೆಯವರಿಗೆ ಒಪ್ಪಿಸಿ ಮುಂದಿನ ಅಂತಿಮ ಸಂಸ್ಕಾರ ನಡೆಸಲು ನೆರವಾಗಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ಅಂಕೋಲಾ ತಾಲೂಕಿನ ಉಳವರಿ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬುವರು ಕಳೆದ ವಾರ ಸಂಭವಿಸಿದ ಭೂ ಕುಸಿತದ ವೇಳೆ ನೀರುಪಾಲಾಗಿದ್ದು ಅವರ ಮೃತದೇಹ ಮಂಗಳವಾರ ಗಂಗಾವಳಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆದರೆ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ, ಸ್ಥಳಿಯ ಆಡಳಿತ, ಶಾಸಕರು ಯಾರು ಸ್ಥಳದಲ್ಲಿ ಇರಲಿಲ್ಲ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಹಿಳೆಯರು ಕಾಳಜಿ ಕೇಂದ್ರದಲ್ಲಿದ್ದು ಸ್ಥಳದಲ್ಲಿ ಯಾರು ಇರಲಿಲ್ಲ. ಬರುವವರು ಇಲ್ಲದೆ, ರಸ್ತೆ ಸರಿ ಇಲ್ಲದೆ ವೃದ್ದೆಯ ಶವ ಆಂಬುಲೆನ್ಸ್ ನಲ್ಲಿ ಉಳಿದುಕೊಂಡಿತ್ತು. ಕೊಳೆತ ವಾಸನೆಯಿಂದ ಶವ ಹೊರಲು ಯಾರು ಮುಂದೆ ಬರಲಿಲ್ಲ. ಆಗ ಮಂಗಳೂರಿನ ಪತ್ರಕರ್ತರು ಮೃತದೇಹವನ್ನು ಹೊತ್ತುಕೊಂಡು ಸಾಗಿದರು.
ನಿರಾಶ್ರಿತರು ಮತ್ತು ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ಹೇಳಲು ಮಂಗಳೂರಿಂದ ತೆರಳಿದ್ದ ಪತ್ರಕರ್ತರ ಚಾರಣ ತಂಡದ ಸದಸ್ಯರಾದ ಮೋಹನ್ ಕುತ್ತಾರ್, ಶಶಿ, ಗಿರೀಶ್ ಮಳಲಿ, ಶಿವಶಂಕರ್ ಅಂತ್ಯಸಂಸ್ಕಾರದಲ್ಲಿ ಸಹಕಾರ ನೀಡಿದರು.