ಬೆಂಗಳೂರು: ರಾಜ್ಯಪಾಲರು ಈ ಹಿಂದೆ ಬುಲೆಟ್ ಫ್ರೂಫ್ ಕಾರು ಇದ್ದರೂ ಅದನ್ನು ಬಳಕೆ ಮಾಡದೆ ಸಾಮಾನ್ಯ ಕಾರಿನಲ್ಲೇ ಓಡಾಡುತ್ತಿದ್ದರು. ಆದರೆ ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಬುಲೆಟ್ ಪ್ರೂಫ್ ಕಾರು ಬಳಕೆಗೆ ಮುಂದಾಗಿದ್ದಾರೆ.

ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ರಾಜ್ಯಪಾಲ ಥಾವರ್‌ಚಂದ್ ಗೆಹೋತ್ ಬುಲೆಟ್‌ ಪ್ರೂಫ್ ಕಾರು ಬಳಸುತ್ತಿದ್ದಾರೆ.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲಿಗರು, ಸಿದ್ದರಾಮಯ್ಯ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆಗಳು ಕೂಡ ನಡೆದಿವೆ. ಅತಿರೇಕದ ಹೇಳಿಕೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮುಂಚಿತವಾಗಿಯೇ ಎಚ್ಚೆತ್ತುಕೊಂಡು ಬುಲೆಟ್ ಪ್ರೊಫ್ ಕಾರು ಉಪಯೋಗಿಸುತ್ತಿದ್ದಾರೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಸಂಪುಟದ ಮಂತ್ರಿಗಳು, ಶಾಸಕರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ಬುಲೆಟ್ ಪ್ರೂಫ್ ಕಾರಿನ ಮೊರೆ ಹೋಗಿದ್ದಾರೆ.

ಅದರಲ್ಲೂ ಐವಾನ್ ಡಿಸೋಜ ಇತ್ತೀಚಿಗೆ ಮಂಗಳೂರಿನಲ್ಲಿ ಬಾಂಗ್ಲಾದೇಶ ಪರಿಸ್ಥಿತಿ ಕರ್ನಾಟಕದಲ್ಲಿ ಎದುರಾಗಬಹುದು ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು.