ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಪೂರ್ಣಗೊಂಡಿಲ್ಲ. ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯದ ಜನತೆ ಭಯದಲ್ಲಿ ಬದುಕುವ ದಾರುಣ ಸ್ಥಿತಿಗೆ ತಲುಪಿದ್ದು ಇದೊಂದು ಅಸಮರ್ಥ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಪದೇಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ,
ಸರಕಾರದ ಅಸಮರ್ಥ ಆಡಳಿತದಿಂದ, ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವಿಲ್ಲದ ಗೃಹ ಸಚಿವರನ್ನು ಮೊದಲು ಬದಲಾಯಿಸಿ. ಇಂತಹ ಪರಿಸ್ಥಿತಿಯನ್ನು ಅವಲೋಕನ ಮಾಡಲೂ ಅಸಮರ್ಥವಾಗಿರುವ ರಾಜ್ಯ ಸರಕಾರಕ್ಕೆ‌ ಅಧಿಕಾರದಲ್ಲಿ‌ ಮುಂದುವರಿಯುವ ನೈತಿಕತೆಯೆ ಇಲ್ಲ.
ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಲಾಭದ ಹುನ್ನಾರ, ಮತಬ್ಯಾಂಕ್ ದ ಕಾರಣದಿಂದ ಕಾನೂನು- ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ರಾಜ್ಯವು ಇಂದು ಗೂಂಡಾರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಗೊಂಡಿದೆ. ಅಂಕಿ ಅಂಶದ ಪ್ರಕಾರ, ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ಕಳೆದ 11ತಿಂಗಳಲ್ಲಿ ಶೇ 70ಕ್ಕಿಂತ ಹೆಚ್ಚು ಈ ಕ್ರಿಮಿನಲ್ ಚಟುವಟಿಕೆ ರಾಜ್ಯದಲ್ಲಿ ಜಾಸ್ತಿ ಆಗಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳು ಜಾಸ್ತಿಯಾಗಿವೆ.
ಇದಕ್ಕೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆಗಾರವಾಗಿದೆ. ಸರಕಾರ ದುಷ್ಕೃತ್ಯ ಮಾಡುವವರ ವಿರುದ್ದ ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ಪದೇಪದೇ ಇಂಥ ದುರ್ಘಟನೆಗಳು ಹೆಚ್ಚಾಗಿವೆ.
ಹುಬ್ಬಳ್ಳಿಯ ಅಂಜಲಿಯ ಹತ್ಯಾ ಪ್ರಕರಣ, ಅದಕ್ಕೂ ಮೊದಲು ನೇಹಾ ಪ್ರಕರಣ, ಬೆಳಗಾವಿಯಲ್ಲಿ ನಡೆದ ದಲಿತ ಮಹಿಳೆಯ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ, ರೊಟ್ಟಿ ಕೇಳಿದ ದಲಿತ ಯುವಕನ ಹತ್ಯೆ. ಒಂದು ಕಡೆ ಮತಾಂಧ ಶಕ್ತಿಗಳು ಸ್ವಚ್ಛಂದವಾಗಿ ವಿಜೃಂಭಿಸುತ್ತಿದ್ದರೆ ಇನ್ನೊಂದು ಕಡೆ ಕೊಲೆಗಡುಕರು, ಗೂಂಡಾ ರಾಜ್ಯವಾಗಿ ಕರ್ನಾಟಕ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ರಾಜ್ಯ ಸುರಕ್ಷಿತವಾಗಿಲ್ಲ. ಕರ್ನಾಟಕವು ಅಪಾಯಕಾರಿ ಸ್ಥಿತಿಯಲ್ಲಿದೆ.
ಈ ಸಂಬಂಧವಾಗಿ ರಾಜ್ಯದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಈ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಒಬ್ಬ ಅಸಮರ್ಥ ರಾಜ್ಯದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ರಾಜ್ಯದ ಜನತೆಯ ಸುರಕ್ಷತೆಗೆ ಇದು ಕಾರ್ಯರೂಪಕ್ಕೆ ಬರಲೇಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.