ಗೋಕಾಕ : ಮನುಷ್ಯ ಜಗತ್ತನ್ನು ಅರಿಯುವಲ್ಲಿ ಅಂತರಿಕ್ಷದ ಪಾತ್ರ ಹಿರಿದಾಗಿದೆ. ಮಾನವ ಕೇವಲ ಭೂಮಿಯ ಮೇಲೆ ಏನಿದೆ ಎಂದು ಅರಿತರೆ ಸಾಲದು; ಭೂಮಂಡಲದಾಚೆ ಅಂತರಕ್ಷಿವನ್ನು ಅರಿತಾಗ ಭವಿಷ್ಯಕ್ಕಾಗಿ ನಾವಿನ್ನೂ ಏನನ್ನು ಮಾಡುಬಹುದಾಗಿದೆ ಎಂದು ತಿಳಿಯಲು ಸಾಧ್ಯ ಎಂದು ಇಸ್ರೊ ಅಧ್ಯಕ್ಷ ಡಾ.ಎಸ್. ಸೋಮನಾಥ ಹೇಳಿದರು.

ಇಲ್ಲಿನ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶುಕ್ರವಾರ, 19ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಶೂನ್ಯ ಸಂಪಾದನಾ ಮಠದಿಂದ ನೀಡಲಾದ ‘ಕಾಯಕ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಭಾರತದ ಪ್ರತಿಯೊಬ್ಬ ಪ್ರಜೆಯೂ ಅಂತರಿಕ್ಷ ಮತ್ತು ಬಾಹ್ಯಾಕಾಶ ಕುರಿತು ಕನಿಷ್ಠ ತಿಳಿವಳಿಕೆ ಹೊಂದುವುದು ಭವಿಷ್ಯದ ದಿನಗಳಿಗೆ ಅತ್ಯಂತ ಅಗತ್ಯ’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ಮೋದಿ ಅವರು ಅಂತರಿಕ್ಷ ಮತ್ತು ಬಾಹ್ಯಾಕಾಶ ಯಾನ ಕುರಿತು ಹೊಂದಿದ ಆಸಕ್ತಿ ಇಡೀ ಇಸ್ರೊ ಸಿಬ್ಬಂದಿಯನ್ನು ಬೆರಗುಗೊಳಿಸಿದೆ. ಇಸ್ರೊ ವಿಶ್ವದ ನಂಬರ್‌ ಒನ್‌ ಅಂತರಿಕ್ಷ ಸಂಸ್ಥೆಯನ್ನಾಗಿಸುವ ಅವರ ಕನಸು ನಿಜಕ್ಕೂ ಎಲ್ಲರಲ್ಲೂ ಚೈತನ್ಯ ಮೂಡಿಸಿದೆ’ ಎಂದು ಬಣ್ಣಿಸಿದರು.

‘2035ರಲ್ಲಿ ಭಾರತ ‘ಸ್ಪೇಸ್ ಸ್ಟೇಷನ್’ ಮತ್ತು 2040ರ ವೇಳೆಗೆ ‘ಲ್ಯಾಂಡ್ ಆಫ್ ಮೂನ್’ ನಿರ್ಮಿಸುವ ಕನಸನ್ನು ಹೊಂದಿದೆ. ಅದನ್ನು ಈಡೇರಿಸುವ ಗುರಿಯನ್ನು ಅತ್ಯಂತ ಸೂಕ್ಷ್ಮತೆಯಿಂದ ಮುಂದುವರೆಸುವಂತೆ ಪ್ರಧಾನಿ ಇಸ್ರೊಗೆ ಸಂದೇಶ ನೀಡಿದ್ದಾರೆ. ಇದು ನಮ್ಮ ಭಾಗ್ಯ’ ಎಂದೂ ಹೇಳಿದರು.

‘ಕಳೆದ ಆಗಸ್ಟ್‌ನಲ್ಲಿ ಭಾರತೀಯ ಗಗನಯಾನ ಸಿಬ್ಬಂದಿ ಹಗಲಿರುಳೆನ್ನದೇ ಮಾಡಿದ ಪರಿಶ್ರಮದ ಫಲವಾಗಿ ಚಂದ್ರನಲ್ಲಿ ಭಾರತ ತನ್ನ ಮೊದಲ ಹೆಜ್ಜೆ ಊರಲು ಸಾಧ್ಯವಾಯಿತು. ನಾನು ಇಸ್ಟೊ ಪರವಾಗಿ ಎಲ್ಲ ಭಾರತೀಯರ ಬೆಂಬಲಕ್ಕೆ ಚಿರಋಣಿ’ ಎಂದೂ ಪುನರುಚ್ಚರಿಸಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಘಟಪ್ರಭಾದ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ, ವಿಜಯಪುರದ ಶರಣ ತತ್ವ ಚಿಂತಕ ಜೆ.ಎಸ್‌.ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ ಉಪಸ್ಥಿತರಿದ್ದರು.

ಇಸ್ರೊಗೆ ವಿದ್ಯಾರ್ಥಿಗಳ ಆಹ್ವಾನ

ಗೋಕಾಕದ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ವಿದ್ಯಾರ್ಥಿಗಳೊಂದಿಗೆ ಇಸ್ರೋ ಅಧ್ಯಕ್ಷ ಡಾ.ಎಸ್‌. ಸೋಮನಾಥ ಅವರು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಅಂತರಿಕ್ಷದ ಬಗ್ಗೆ ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಅವರು ರೋಚಕ ಉತ್ತರವನ್ನು ನೀಡಿದರು.

ಸಂವಾದದ ಪ್ರಮುಖ ಅಂಶಗಳನ್ನು ವೇದಿಕೆ ಮೂಲಕ ಹಂಚಿಕೊಂಡ ಡಾ.ಸೋಮನಾಥ ಅವರು, ಗೋಕಾಕಿನ ವಿದ್ಯಾರ್ಥಿಗಳೆಲ್ಲ ಅಂತರಿಕ್ಷ ಕುರಿತು ಅರಿತುಕೊಳ್ಳುವ ಕುತೂಹಲ ಹೊಂದಿದ್ದಾರೆ. ಅವರನ್ನು ನಮ್ಮ ಕೇಂದ್ರಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದರು.