ಖಾನಾಪುರ :
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ 62 ನೇ ಜನ್ಮದಿನಾಚರಣೆ ನಿಮಿತ್ತ ಲೈಲಾ ಸಕ್ಕರೆ ಕಾರ್ಖಾನೆಯಲ್ಲಿ ಮಹಾ ಲಕ್ಷ್ಮೀ ಸಮೂಹ ತೋಪಿನಕಟ್ಟಿ, ಲೈಲಾ ಶುಗರ್ಸ್, ಸರಕಾರಿ ಆಸ್ಪತ್ರೆ ವತಿಯಿಂದ ರವಿವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ರಕ್ತದಾನ ಸರ್ವಶ್ರೇಷ್ಠ ದಾನವಾಗಿದೆ. ರಕ್ತದಾನದಿಂದ ಹಲವಾರು ಜನರಿಗೆ ಬದುಕು ನೀಡುವ ಪುಣ್ಯಕಾರ್ಯ ನಿಮ್ಮಿಂದ ಆಗುತ್ತಿದೆ. ಎಲ್ಲರೂ ರಕ್ತದಾನ ಮಾಡಬೇಕು. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಲೈಲಾ ಶುಗರ್ ಎಂ.ಡಿ. ಸದಾನಂದ ಪಾಟೀಲ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ದೇಹ ಆರೋಗ್ಯದಿಂದ ಕೂಡಿರುತ್ತದೆ. ಅದಕ್ಕಾಗಿ ಎಲ್ಲರೂ ರಕ್ತದಾನವನ್ನು ನಿಯಮಿತವಾಗಿ ಕಾಲಕಾಲಕ್ಕೆ ಮಾಡಬೇಕು ಎಂದು ತಿಳಿಸಿದರು.

ಖಾನಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಬಸವರಾಜ ಕಿವಡಸಣ್ಣವರ ನೇತೃತ್ವದಲ್ಲಿ ವೈದ್ಯರು ರಕ್ತದಾನ ಶಿಬಿರ ನಡೆಸಿಕೊಟ್ಟರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಂಜಯ ಕುಬಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಶ್ರೀ ಸರ್ ದೇಸಾಯಿ, ರವಿ ಕಟಗಿ, ಸುನಿಲ್, ಸಿದ್ದ ಪಾಟೀಲ, ಮಹಾ ಲಕ್ಷ್ಮೀ ಸಮೂಹ ಸಂಸ್ಥೆಯ ನಿರ್ದೇಶಕ ಚಂಗಪ್ಪ ನಿಲಜಕರ, ಯಲ್ಲಪ್ಪ ತಿರವಿರ, ಭರಮಣಿ ಪಾಟೀಲ, ಕಬ್ಬು ವಿಭಾಗದ ವ್ಯವಸ್ಥಾಪಕ ಬಾಳ ಸಾಹೇಬ್ ಶೇಲಾರ್ ಮುಂತಾದವರು ಉಪಸ್ಥಿತರಿದ್ದರು. ಲೈಲಾ ಶುಗರ್ಸ್ ನೌಕರರು, ರೈತರು, ರಕ್ತದಾನಿಗಳು, ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿದರು.