ನವದೆಹಲಿ : ಬಹುನಿರೀಕ್ಷಿತ ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳವನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳದಲ್ಲಿ ಪ್ರಾರಂಭವಾಗುತ್ತದೆ. ಭಾರತದ ಕೃಷಿ ಆರ್ಥಿಕತೆಗೆ ನಾಲ್ಕು-ತಿಂಗಳ ನೈಋತ್ವ ಮಾನ್ಸೂನ್‌ ಋತುಮಾನವು ನಿರ್ಣಾಯಕವಾಗಿದೆ, ಇದು ದೇಶದಾದ್ಯಂತ ವಾರ್ಷಿಕ ಮಳೆಯ ಸುಮಾರು 75% ರಷ್ಟನ್ನು ಒದಗಿಸುತ್ತದೆ. ಕಾಲೋಚಿತ ಮಳೆಯು ಸಾಮಾನ್ಯವಾಗಿ ಜೂನ್ 1 ರಂದು ಸುಮಾರು ಏಳು ದಿನಗಳ ವಿಚಲನದೊಂದಿಗೆ ಕೇರಳದಲ್ಲಿ ಪ್ರಾರಂಭವಾಗುತ್ತದೆ. ಕಳೆದ ವರ್ಷ, ಮಾನ್ಸೂನ್ ಜೂನ್ 8 ರಂದು ಪ್ರಾರಂಭವಾಯಿತು.

ಈ ಬಾರಿ ಮಾನ್ಸೂನ್‌ ಆರಂಭವು ಸಹಜ ಸ್ಥಿತಿಗೆ ತಲುಪುವ ನಿರೀಕ್ಷೆ ಇದೆ. ಐಎಂಡಿ (IMD) ಪ್ರಕಟಿಸಿದ ಜೂನ್ 1 ರ ಮಾನ್ಸೂನ್‌ ಪ್ರಾರಂಭದ ಪ್ರಸ್ತುತ ದಿನಾಂಕವು +/-4 ದಿನಗಳ ಮಾದರಿ ದೋಷವನ್ನು ಹೊಂದಿದೆ ಎಂದು ಅದು ಹೇಳಿದೆ.
ಇತ್ತೀಚಿನ ಮುನ್ಸೂಚನೆಯು ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ತಲುಪಬಹುದು ಎಂದು ಸೂಚಿಸುತ್ತದೆ. ಇದರ ನಂತರ ಮುಂಗಾರು ಮೇ 29 ಮತ್ತು ಜೂನ್ 1ರ ನಡುವೆ ಕೇರಳಕ್ಕೆ ಅಪ್ಪಳಿಸಬಹುದು. ಸಾಮಾನ್ಯವಾಗಿ, ಜೂನ್ 10ರೊಳಗೆ ಮುಂಗಾರು ಮಹಾರಾಷ್ಟ್ರವನ್ನು ಪ್ರವೇಶಿಸುತ್ತದೆ.

ಈ ವರ್ಷ ಅದು ಸರಿಯಾದ ಸಮಯಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 15ರ ವೇಳೆಗೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರಕ್ಕೆ ಮಾನ್ಸೂನ್‌ ಪ್ರವೇಶಿಸಬಹುದು. ಜೂನ್ 20-25ರ ನಡುವೆ ಇದು ಉತ್ತರ ಪ್ರದೇಶ, ಹಿಮಾಚಲ, ಉತ್ತರಾಖಂಡ ಮತ್ತು ಕಾಶ್ಮೀರವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಜೂನ್ 30ರಂದು ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್‌ ತಲುಪಬಹುದು. ಇದು ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.
ಈ ವರ್ಷ, ಹವಾಮಾನ ಇಲಾಖೆಯು ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದ ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೇಶಕ್ಕೆ ವಾಡಿಕೆಗಿಂತ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಮುನ್ಸೂಚನೆಯ ಪ್ರಕಾರ, ಮಳೆಯ ಪ್ರಮಾಣ 106% ಆಗಿರಬಹುದು ಎಂದು ಹೇಳಿದೆ. ಅನುಕೂಲಕರ ಪರಿಸ್ಥಿತಿಗಳಿಂದಾಗಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗುವ ವಿಶ್ವಾಸವನ್ನು IMD ಹೊಂದಿದೆ.