ಬೆಳಗಾವಿ ಸುವರ್ಣವಿಧಾನಸೌಧ :
ರಾಜ್ಯ ಸರ್ಕಾರವು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಆಗಲು ಅವಕಾಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸ್ಪಷ್ಠಪಡಿಸಿದರು.

ಶುಕ್ರವಾರದ ಅಧಿವೇಶನದ ವಿಧಾನಪರಿಷತ್‌ನಲ್ಲಿ ಸದಸ್ಯ ಛಲವಾದಿ ಟಿ. ನಾರಾಯಣ ಸ್ವಾಮಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಧಿನಿಯಮ 2013 ಮತ್ತು ನಿಯಮಗಳು 2017 ರಲ್ಲಿ ಪ.ಜಾತಿ ಮತ್ತು ಪಂಗಡದ ಜನರಿಗೆ ನೇರವಾಗಿ ಪ್ರಯೋಜನವಾಗುವ ಕಾರ್ಯಕ್ರಮಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನವನ್ನು ಹಂಚಿಕೆ ಮಾಡಿ ಅನುಷ್ಠಾನಗೊಳಿಸಲು ಅವಕಾಶವಿದ್ದು, ಈ ಅನುದಾನವನ್ನು ಯಾವುದೇ ಸಂದರ್ಭದಲ್ಲೂ ಅನ್ಯ ಉದ್ದೇಶಕ್ಕಾಗಿ ಬಳಸುವುದಿಲ್ಲ ಹಾಗೂ ಕಾಯ್ದೆಯ ಉಲ್ಲಂಘನೆಯ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಗ್ಯಾರಂಟಿ ಯೋಜನೆಗಳಿಗಾಗಿ, ಗೃಹಲಕ್ಷ್ಮೀ ಯೋಜನೆಗೆ 5075 ಕೋಟಿ ರೂ, ಅನ್ನಬಾಗ್ಯ ಯೋಜನೆಗೆ 2779.50 ಕೋಟಿ ರೂ, ಗೃಹಜ್ಯೋತಿ ಯೋಜನೆಯಡಿ 2410 ಕೋಟಿ ರೂ, ಶಕ್ತಿ ಯೋಜನೆಗೆ 812 ಕೋಟಿ ರೂ, ಯುವನಿಧಿ ಯೋಜನಗೆ 67.50 ಕೋಟಿ ರೂ ಒದಗಿಸಲಾಗಿದ್ದು, ಈ ಮಒತ್ತವನ್ನು ಪ.ಜಾತಿ/ಪಂಗಡದವೆ ಉಪಯೋಗಿಸುತ್ತಿರುವುದರಿಂದ ಸದರಿ ಅನುದಾನದ ದುರ್ಬಳಕೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ದುರ್ಬಳಕೆ ತಡೆಯುವ ಉದ್ದೇಶದಿಂದಲೇ ಕಾಯ್ದೆಯ ಸೆಕ್ಷನ್ 7 (ಡಿ) ಯನ್ನು ಕೈಬಿಡಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ.ಜಾತಿ ಮತ್ತು ಪ.ವರ್ಗಗಳ ಕಲ್ಯಾಣಕ್ಕಾಗಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಲ್ಲಿ ಮೀಸಲಿಟ್ಟ ಅನುದಾನದಲ್ಲಿ 2023-24 ನೇ ಸಾಲಿನಲ್ಲಿ 11 ಸಾವಿರಕ್ಕೂ ಅಧಿಕ ಮೊತ್ತವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆಳಿಗೆ ವರ್ಗಾಯಿಸಿದೆ ಎಂಬ ವಿಧಾನಪರಿಷತ್ ಸದಸ್ಯ ಛಲವಾದಿ ಟಿ. ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಪೂರಕವಾಗಿ ಸದಸ್ಯರಾದ ತೇಜಸ್ವಿನಿಗೌಡ, ಭೋಜೇಗೌಡ, ಕೋಟ ಶ್ರೀನಿವಾಸ ಪೂಜಾರಿ, ತಿಪ್ಪೇಸ್ವಾಮಿ, ಶಾಂತಾರಾಮ್, ರವಿಕುಮಾರ್ ದನಿಗೂಡಿಸಿದರು.

ಸರ್ಕಾರದ ಉತ್ತರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸದಸ್ಯರು ಸದಸನದ ಬಾವಿಗಳಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸದನವನ್ನು 2 ಬಾರಿ 10 ನಿಮಿಷಗಳ ಕಾಲ ಮುಂದೂಡಲಾಯಿತು.
ಅಂತಿಮವಾಗಿ ಈ ಕುರಿತು ಸೋಮವಾರ ಅರ್ಧ ಗಂಟೆಯ ಚರ್ಚೆಗ ಅವಕಾಶ ನೀಡುವುದಾಗಿ ಸಭಾಪತಿಗಳು ಅನುಮತಿ ನೀಡುವ ಮೂಲಕ ವಿರೋಧಪಕ್ಷಗಳ ಪ್ರತಿಭಟನೆಯನ್ನು ಶಮನಗೊಳಿಸಿದರು. ಸರ್ಕಾರದ ಪರವಾಗಿ ಸಚಿವ ಪ್ರಿಯಾಂಕ ಖರ್ಗೆ, ಮುನಿಯಪ್ಪ ಮಾತನಾಡಿದರು.