ಮೂಡಲಗಿ :ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಿ ಕೇಂದ್ರ ಸರ್ಕಾರ ಮಂಜೂರು ನೀಡಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಬುಧವಾರದಂದು ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಮೂರು ಹೊಸ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಲಾಗಿದ್ದು, ಅದರಲ್ಲಿ ಮೂಡಲಗಿ ವಲಯದಲ್ಲಿ ಎರಡು ಹೊಸ ಸರ್ಕಾರಿ ಪ್ರೌಢಶಾಲೆಗಳು ಮೇಲ್ದರ್ಜೆಗೇರಿದ್ದು, ಪದವಿ ಪೂರ್ವ ಮಹಾವಿದ್ಯಾಲಯಗಳಾಗಿ ಉನ್ನತಿಕರಣಗೊಂಡಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 13 ಪ್ರೌಢಶಾಲೆಗಳು ಉನ್ನತಿಕರಣಗೊಂಡಿವೆ. ಇದರಲ್ಲಿ ನಮ್ಮ ಮೂಡಲಗಿ ವಲಯವೊಂದರಲ್ಲೇ 2 ಹೊಸ ಪದವಿ ಪೂರ್ವ ಮಹಾವಿದ್ಯಾಲಯಗಳಾಗಿ ಮೇಲ್ದರ್ಜೆಗೆ ಏರಿದ್ದು, ಇದರಿಂದ ಕಾಲೇಜುಗಳ ಸಂಖ್ಯೆ 5 ರಿಂದ 7 ಕ್ಕೆ ಏರಿದಂತಾಗಿದೆ. ಪಿಯುಸಿ ಪ್ರಥಮ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಲಭ್ಯವಾಗಲಿದೆ. ದೂರದ ಮೂಡಲಗಿ ಮತ್ತು ಗೋಕಾಕ ಪಟ್ಟಣಗಳಿಗೆ ಈ ಶಿಕ್ಷಣಕ್ಕಾಗಿ ತೆರಳಬೇಕಾಗಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಲಿದೆ. ತಿಗಡಿ ಮತ್ತು ಅವರಾದಿ ಗ್ರಾಮಗಳ ಸುತ್ತಮುತ್ತಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯುಸಿ ಪ್ರಥಮ ವರ್ಷದವರೆಗೆ ವ್ಯಾಸಂಗ ಮಾಡಲು ಕೇಂದ್ರದ ಶಿಕ್ಷಣ ಸಚಿವಾಲಯವು ಸುತ್ತೋಲೆ ಹೊರಡಿಸಿ ಆದೇಶಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಮೂಡಲಗಿ ವಲಯದ ಕೌಜಲಗಿ, ಹಳ್ಳೂರ, ನಾಗನೂರ, ಬಳೋಬಾಳ ಮತ್ತು ವಡೇರಹಟ್ಟಿ ಗ್ರಾಮಗಳಲ್ಲಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯಗಳಿದ್ದು, ತಿಗಡಿ ಮತ್ತು ಅವರಾದಿ ಸೇರಿ ಒಟ್ಟು 7 ಸರ್ಕಾರಿ ಪ.ಪೂ. ಮಹಾವಿದ್ಯಾಲಯಗಳನ್ನು ಮೂಡಲಗಿ ವಲಯವು ಹೊಂದಿದಂತಾಗಿದೆ. ಸುಮಾರು 37 ಸರ್ಕಾರಿ ಪ್ರೌಢಶಾಲೆಗಳು ನಮ್ಮ ವಲಯದಲ್ಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ತಿಗಡಿ ಮತ್ತು ಅವರಾದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತಕ್ಕೆ ಅನುಗುಣವಾಗಿ ಎರಡು ಪದವಿ ಪೂರ್ವ ಕಾಲೇಜು ಮಂಜೂರಾತಿಗಾಗಿ ಶ್ರಮಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಎರಡೂ ಗ್ರಾಮಗಳ ಗ್ರಾಮಸ್ಥರು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.