ಮೂಡಲಗಿ; ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಆಯಾ ಇಲಾಖಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ನೌಕರರ ಸಂಘದ ನೂತನ ಸದಸ್ಯರು ಶ್ರಮಿಸುವಂತೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು.

ಇದೇ ದಿ 28 ರಂದು ನಡೆಯಬೇಕಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಅದರ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಸಂಘದ ಸದಸ್ಯರ ಹಿತಾಸಕ್ತಿಗೆ ಅನುಗುಣವಾಗಿ ಸ್ಪಂದಿಸುವ ಕರ್ತವ್ಯ ನಿಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಇದರಲ್ಲಿ ಚುನಾಯಿತರಾಗಿದ್ದಾರೆ. ಇದರಿಂದ ನಿಮಗೆ ಹೆಚ್ಚು ಜವಾಬ್ದಾರಿ ಬಂದಿದೆ. ಮೇಲಾಧಿಕಾರಿಗಳ ಸೂಚನೆಗಳನ್ನು ಪಾಲಿಸುವುದರ ಜತೆಗೆ ನೌಕರರ ಹಿತಕ್ಕೆ ಅನುಗುಣವಾಗಿ ಕೆಲಸ ಮಾಡುವುದಾಗಬೇಕು. ಅಂದಾಗ ಮಾತ್ರ ನೌಕರರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಬೇರೆ- ಬೇರೆ ತಾಲ್ಲೂಕುಗಳಂತೆ ನಮ್ಮ ತಾಲ್ಲೂಕು ನೌಕರರ ಸಂಘಕ್ಕೆ ಚುನಾವಣೆ ನಡೆಯುತ್ತಿಲ್ಲ. ಎಲ್ಲ ಇಲಾಖೆಗಳ ನೌಕರರು ಒಗ್ಗಟ್ಟಾಗಿ ಒಂದಾಗಿ ಎಲ್ಲ 24 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಸಂಘದ ನಿಯಮಗಳಂತೆ ಆಯಾ ಇಲಾಖೆಗಳಿಗೆ ಆದ್ಯತೆ ನೀಡಲಾಗಿದೆ. ಮೂಡಲಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅವಿರೋಧ ಆಯ್ಕೆಯು ಇತರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ನೌಕರರ ಸಂಘದ ಬೇಡಿಕೆಗಳಿಗೆ ಸದಾ ಸ್ಪಂದಿಸಲಾಗುವುದು. ಸಂಘಕ್ಕೆ ಹೊಸದಾಗಿ ಆಯ್ಕೆಯಾಗಿರುವ ನಿರ್ದೇಶಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿಗೊಳಿಸಬೇಕು. ಇದಕ್ಕೆ ಬೇಕಾದ ಎಲ್ಲ ಸಹಾಯ- ಸಹಕಾರವನ್ನು ನೀಡಲಾಗುವುದು ಅವರು ತಿಳಿಸಿದರು.
ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ :

ಸತೀಶ ಉಮರಾಣಿ (ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ), ಗೋಪಾಲ ಮುತ್ತೆಪ್ಪಗೋಳ, ಅಕ್ಷಯ ಅವಾಡೆ(ಕಂದಾಯ ಇಲಾಖೆ), ಸದಾಶಿವ ಸವದತ್ತಿ, ವಿ.ಎ. ಹುಲ್ಲಾರ, ಶಿವನಗೌಡ ಪಾಟೀಲ, ಶಿವಬಸಪ್ಪ ಕುಂಬಾರ, ಸಿದ್ಧಾರೂಢ ನಾಗನೂರ(ಶಿಕ್ಷಣ ಇಲಾಖೆ ಪ್ರಾಥಮಿಕ),ರಮೇಶ ಬುದ್ನಿ, ಎಸ್.ಕೆ.ಚಿಪ್ಪಲಕಟ್ಟಿ(ಶಿಕ್ಷಣ ಇಲಾಖೆ ಪ್ರೌಢ), ಚೇತನ ಕುರಿಹುಲಿ(ಶಿಕ್ಷಣ ಇಲಾಖೆ ಆಡಳಿತ ಕಚೇರಿ), ಅಪ್ಪಯ್ಯ ಹುಣಶ್ಯಾಳ(ಸ.ಪ.ಪೂ. ಕಾಲೇಜು), ಶಾಂತವ್ವ ಮರೆನ್ನವರ(ಸಮಾಜ ಕಲ್ಯಾಣ ಇಲಾಖೆ), ಮಹಾಂತೇಶ ಹಿಪ್ಪರಗಿ (ಅರಣ್ಯ ಇಲಾಖೆ), ಆನಂದ ಹಂಜ್ಯಾಗೋಳ, ಸಂಜೀವ ಕೌಜಲಗಿ, ಶಿವಲಿಂಗಪ್ಪ ಪಾಟೀಲ, ರಾಮಚಂದ್ರ ಸಣ್ಣಕ್ಕಿ, ಸಿದ್ದಣ್ಣ ಕರೋಳಿ(ಆರೋಗ್ಯ ಮತ್ತು ಕು.ಕ. ಇಲಾಖೆ),ವಾಸುದೇವ ಹೂವಣ್ಣವರ(ಖಜಾನೆ), ವೆಂಕಟೇಶ ಕೊಪ್ಪದ (ನ್ಯಾಯಾಂಗ ಇಲಾಖೆ), ಸದಾಶಿವ ದೇವರ, ಚೇತನ ಬಳಿಗಾರ(ಗ್ರಾ.ಅ. ಮತ್ತು ಪಂ. ರಾಜ್ ಇಲಾಖೆ), ಕಸ್ತೂರಿ ಪಡೆನ್ನವರ(ಮಹಿಳಾ ಮತ್ತು ಮ.ಕಲ್ಯಾಣ ಇಲಾಖೆ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಒಟ್ಟು 24 ಸ್ಥಾನಗಳಿಗೆ ನಾಮಪತ್ರಗಳನ್ನು ಸಲ್ಲಿಸುವ ಕಡೆಯ ದಿನವಾಗಿದ್ದ ಶುಕ್ರವಾರದಂದು ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದ ಇಂದು ಶನಿವಾರದಂದು ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದರಿಂದ ಎಲ್ಲ 24 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಇದೇ 21 ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯುವ ದಿನವಾಗಿದೆ. ಈಗಾಗಲೇ 24 ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ ಬರುವ 28 ರಂದು ನಿಗದಿಯಾಗಿದ್ದ ಚುನಾವಣೆಯನ್ನು ನಡೆಸುವ ಅಗತ್ಯವಿಲ್ಲ. ಬರುವ ಸೋಮವಾರದಂದು ಈ ಸಂಘದ ಚುನಾವಣೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದೆಂದು ಚುನಾವಣಾಧಿಕಾರಿಯಾಗಿರುವ ಪಿಡಿಓ ಶಿವಾನಂದ ಗುಡಸಿ ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮೂಡಲಗಿ ತಾಲ್ಲೂಕಾ ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. 2024 ರಿಂದ 2029 ರ ತನಕ ಈ ಸಂಘಕ್ಕೆ ಚುನಾವಣೆ ನಡೆದಿದೆ.