Join The Telegram | Join The WhatsApp |
ಮೈಸೂರು:
2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
ಪದ್ಮಭೂಷಣ ಪುರಸ್ಕಾರ ದೊರೆತಿದ್ದಕ್ಕೆ, ಇಲ್ಲಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಈಗ ದೇಶ ಬಹಳ ಪ್ರಗತಿ ಸಾಧಿಸಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ವಿರೋಧ ಪಕ್ಷದಲ್ಲಿರುವವರು ಜವಾಬ್ದಾರಿ ಏನೆಂದು ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ ಎಂದು ವಿಷಾದಿಸಿದರು.
ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು ಸರ್ಕಾರವು ಯಾವ್ಯಾವುದನ್ನು ಮಾಡಿಲ್ಲ ಎಂದು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ ಎಂದರು.
ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತವಾಗಿ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು. ಮತಕ್ಕೋಸ್ಕರ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾತರು ಬೇರೆ ಎಂದು ಮಾಡಿದ್ದೇಕೆ?’ ಎಂದು ಕೇಳಿದರು. ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸರಿಯಾದ ಅಡಿಪಾಯ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ ಎಂದು ಹೇಳಿದರು.
2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗ ಅದು ಹೊರಬಂದಿದ್ದೇಕೆ? ಜಿ–20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿದ್ದನ್ನು ತಡೆಯಲಾಗದೇ ಇಂಥದ್ದೆಲ್ಲ ಶುರು ಮಾಡಿಕೊಂಡಿದ್ದಾರೆ. ಬಹಳ ಹಳೆಯದ್ದನ್ನೆಲ್ಲಾ ಈಗ ತೆಗೆದಿದ್ದಾರೆ ಎಂದರು.
ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ. ಮೋದಿ ಕಾರಣದಿಂದಲೇ ನನಗೆ ಇದು ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ. ಆದರೆ, ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರ್ಕಾರವನ್ನು ಹೊಗಳುವುದಿಲ್ಲ. ನಾನು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಹೀಗಾಗಿ, ಬಹಳ ಸಂತಸವಾಗುತ್ತದೆ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ’ ಎಂದರು.
‘ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನಗೀಗ 92 ವರ್ಷ ವಯಸ್ಸು. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಮುಂದೆಯೂ ನನ್ನ ಪುಸ್ತಕಗಳು ಪ್ರಸ್ತುತವಾಗಿರುತ್ತವೆಯೇ? ಹಾಗಾದಾಗ ಅದೇ ನಿಜವಾದ ಪ್ರಶಸ್ತಿ’ ಎಂದು ಹೇಳಿದರು.
‘ಕುಮಾರವ್ಯಾಸ ಐದು ನೂರು ವರ್ಷ ಹಿಂದಿನವನು. ಈಗಲೂ ಆತನನ್ನು ಓದುತ್ತಾರೆ. ಆ ಬರವಣಿಗೆಯಲ್ಲಿ ಅಂತಹ ಶಕ್ತಿ ಇದೆ. ನನ್ನ ಬರವಣಿಗೆಯಲ್ಲಿ ಆಂತಹ ಶಕ್ತಿ ಇದೆಯೇ ಎನ್ನುವುದನ್ನು ಆಲೋಚಿಸಬೇಕು. ನಾನು ಈವರೆಗೂ ಆಲೋಚಿಸುತ್ತಿರುವುದು ಇದನ್ನೇ’ ಎಂದರು.
ಭೈರಪ್ಪ ಅವರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರವು ಪದ್ಮ ಶ್ರೇಣಿಯ ಪುರಸ್ಕಾರಕ್ಕೆ ಅತ್ಯುತ್ತಮರನ್ನು ಆಯ್ಕೆ ಮಾಡಿದೆ. ಇದರಿಂದ ಇಡೀ ರಾಜ್ಯದ ಜನರಿಗೆ ಖುಷಿಯಾಗಿದೆ ಎಂದು ಹೇಳಿದರು.
Join The Telegram | Join The WhatsApp |