ಬೆಳಗಾವಿ: ಲೋಕಸಭೆಗೆ ಆಯ್ಕೆಯಾದರೆ ಬೆಳಗಾವಿಯ ಔದ್ಯಮಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಅಂಗವಾಗಿ ಬುಧವಾರ ಬೆಳಗಿನಜಾವ ಶ್ರೀನಗರ ಗಾರ್ಡನ್ ಹಾಗೂ ಮಾಳಮಾರುತಿ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಮತಯಾಚನೆ ಮಾಡಿದ ಅವರು, ಬೆಳಗಾವಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲ ರೀತಿಯ ಕೆಲಸ ಮಾಡುತ್ತೇನೆ. ನಿಮ್ಮ ಮತ ವ್ಯರ್ಥವಾಗದಂತೆ ಖಂಡಿತ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಲಸ ಮಾಡುವ ಆಸಕ್ತಿ, ಶಕ್ತಿ, ಉತ್ಸಾಹ ಎಲ್ಲವೂ ಇದೆ. ಒಬ್ಬ ಸಂಸದ ಯಾವ ರೀತಿಯಲ್ಲಿ ಕೆಲಸ ಮಾಡಬೇಕೆನ್ನುವುದನ್ನು ಮಾಡಿ ತೋರಿಸುತ್ತೇನೆ. ಎಲ್ಲರೊಂದಿಗೆ ಸೇರಿ, ಚರ್ಚಿಸಿ ಬೆಳಗಾವಿಯ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುತ್ತೇನೆ ಎಂದು ಮೃಣಾಲ ಹೆಬ್ಬಾಳಕರ್ ತಿಳಿಸಿದರು.

ಸಾರ್ವಜನಿಕರಿಂದ ವ್ಯಾಪಕವಾದ ಬೆಂಬಲ ದೊರೆಯುತ್ತಿದೆ, ಬೆಳಗಾವಿಯ ಭವ್ಯ ಭವಿಷ್ಯಕ್ಕಾಗಿ ಬೆಳಗಾವಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಇಮ್ಮಡಿಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.