ಕುಕನೂರು: ಕೊಪ್ಪಳ ಜಿಲ್ಲೆ ಕುಕನೂರಿನ ಯುವಕ ಖಾದೀರ್‌ ಕಲಾಲ ಎಂಬುವರು ಹೊಸದಾಗಿ ಆರಂಭಿಸಿರುವ ಮಟನ್ ಮತ್ತು ಚಿಕನ್ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿಟ್ಟಿದ್ದಾರೆ. ಶೋಭಾ ಕರಂದ್ಲಾಜೆ ಮಟನ್ ಅಂಡ್ ಚಿಕನ್ ಸೆಂಟರ್ ಹೆಸರಿನ ಈ ಅಂಗಡಿ ಈಗ ಭಾರೀ ವೈರಲ್ ಆಗಿದೆ. ಶೋಭಾ ಅಭಿಮಾನಿಯಾಗಿರುವ ಈ ಯುವಕ ಕರಂದ್ಲಾಜೆಯವರ ಭಾವಚಿತ್ರದ ಟ್ಯಾಟೋವನ್ನು ಕೂಡ ಕೈಗೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

ಖಾದಿರ್ ಬಾಬಣ್ಣ ಕಲಾಲ್ ಅವರು 20 ವರ್ಷಗಳಿಂದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿ. 2018 ರಲ್ಲಿ ಶೋಭಾ ಕರಂದ್ಲಾಜೆ ಅವರು ಪಟ್ಟಣಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಾಗ ಅವರ ರಾಜಕೀಯ ಮಾತು ಕೇಳಿ ಅಪ್ಪಟ ಅಭಿಮಾನಿಯಾಗಿ ಬದಲಾಗಿದ್ದಾರೆ. ಖಾದಿರ್ ಕಲಾಲ್ ಐದು ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಫೋಟೋವನ್ನು ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಮತ್ತು ಚಿಕನ್ ಸೆಂಟರ್ ಹೆಸರನ್ನು ಇಟ್ಟಿರುವ ನಾಮಫಲಕ ಈಗ ಎಲ್ಲೆಡೆ ವೈರಲ್ ಆಗಿದೆ. ನಾನು ಕಳೆದ 20 ವರ್ಷಗಳಿಂದ ಶೋಭಾ ಕರಂದ್ಲಾಜೆ ಮೇಡಂ ಅವರ ಅಭಿಮಾನಿಯಾಗಿದ್ದೇನೆ. ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರ ಅಭಿಮಾನಿಯಾಗಿ ಈಗ ನನ್ನ ಅಂಗಡಿಗೆ ಅವರ ಹೆಸರನ್ನು ನಾಮಕರಣ ಮಾಡಿರುವೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.