ಸುವರ್ಣಸೌಧ ಬೆಳಗಾವಿ :
ಗೃಹ ರಕ್ಷಕರಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆಯನ್ನು ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಂಗಳವಾರ ವಿಧಾನ ಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
21,327 ಪುರುಷ ಹಾಗೂ 4555 ಮಹಿಳೆ ಸೇರಿ ಒಟ್ಟು 25,882 ಗೃಹರಕ್ಷರು ರಾಜ್ಯದಲ್ಲಿ ಕಾರ್ಯ ನಿರ್ವಿಹಿಸುತ್ತಿದ್ದಾರೆ. ಸರ್ಕಾರ ಆದೇಶದಂತೆ ಪೊಲೀಸ್ ಇಲಾಖೆಯ ಬಂದೋಬಸ್ತ್, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಠಾಣೆ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ರೂ.750, ಬೇರೆ ಇಲಾಖೆಗಳಲ್ಲಿ ರೂ.600 ಹಾಗೂ ಪಹರೆ ಕೆಲಸಕ್ಕೆ ಬೆಂಗಳೂರು ನಗರದಲ್ಲಿ ರೂ.455 ಹಾಗೂ ಇತರೆ ಸ್ಥಳದಲ್ಲಿ ರೂ.380 ಭತ್ಯೆ ನೀಡಲಾಗುತ್ತಿದೆ. ಈ ವ್ಯತ್ಯಾಸವನ್ನು ಸರಿ ಪಡಿಸಿ ರೂ.750 ದಿನಭತ್ಯೆ ನೀಡಲು ಸರ್ಕಾರ ಮಟ್ಟದಲ್ಲಿ ಚಿಂತಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಗೃಹರಕ್ಷಕರಲ್ಲಿ ಯಾವುದೇ ತಾರತಮ್ಯ ಇಲ್ಲದೆ ಕರ್ತವ್ಯಕ್ಕೆ ನಿಯೋಜಿಸಬೇಕು. ಗೃಹರಕ್ಷಕರಿಗೆ ಆರೋಗ್ಯ ಭದ್ರತೆ, ಪ್ರಯಾಣ ಭತ್ಯೆಗಳನ್ನು ನೀಡಬೇಕು ಎಂದು ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ ಒತ್ತಾಯಿಸಿದರು.