ದಾವಣಗೆರೆ :
ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 38 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಾಲಿವುಡ್ ನಟಿ ಪೂನಂಪಾಂಡೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿ ಸಾವಿನ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿಬಿಟ್ಟರು. ಆದರೆ, ಪೂನಂ ಪಾಂಡೆ ಬದುಕೇ ಇದ್ದಾರೆ. ಸಾವಿನ ಸುದ್ದಿಯನ್ನಾದರೂ ಪ್ರಕಟಿಸುವ ಮೊದಲು ಪರಿಶೀಲಿಸಿಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು ಇಂಥಾ ಪ್ರಕರಣಗಳಿಂದ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯವಿಲ್ಲ ಎಂದರು.

ಅಭಿವೃದ್ಧಿ ಪತ್ರಿಕೋದ್ಯಮ ಹಿಂದೆ ಸರಿದು ಊಹಾ-ಫೋಹ ಪತ್ರಿಕೋದ್ಯಮಕ್ಕೆ ಆಧ್ಯತೆ ನೀಡಿದ್ದರಿಂದಲೇ ಪೂನಂಪಾಂಡೆ ಥರದ ಘಟನೆಗಳು ಘಟಿಸಿ ಬಿಡುತ್ತವೆ ಎಂದರು.

ಪ್ರತೀ ಪತ್ರಕರ್ತರ ಸಮ್ಮೇಳನಗಳಲ್ಲೂ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ನಿರ್ಣಯಗಳಲ್ಲಿ ಎಲ್ಲವೂ ಜಾರಿ ಆಗುವುದೇ ಇಲ್ಲ. 38 ನೇ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸರ್ಕಾರದ ಎಲ್ಲಾ ನೆರವನ್ನು ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಸಿದ್ದೇಶ್ವರ, ಶಾಸಕ ಮಾಯಕೊಂಡ ಬಸಂತಪ್ಪ , ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.