ಧಾರವಾಡ :
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಭರದ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲಿ ರಾಮನ ಧ್ವಜ ಹಾರಲಿದೆ. ಇದೀಗ ಧಾರವಾಡದಲ್ಲಿ ರಾಮನ ಧ್ವಜದ ತಯಾರಿ ಭರದಿಂದ ಸಾಗಿದೆ.

ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್ ಬಂದಿದೆ. ಕಳೆದ 15 ದಿನಗಳಿಂದ ಪ್ರತೀಶ್‌ ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ.

ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಬಂಪರ್ ಆರ್ಡರ್ ಬಂದಿವೆ. ಕರ್ನಾಟಕವಲ್ಲದೇ ಗೋವಾ, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಿಂದಲೂ ಬೇಡಿಕೆ ಬಂದಿದೆ.

4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ. 5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ. ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿರುವುದು ಈಗ ಗಮನಸೆಳೆದಿದೆ.