Join The Telegram | Join The WhatsApp |
ಬೆಳಗಾವಿ :
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾನೂನು ಸಲಹೆಗಾರ ಅವಶ್ಯಕತೆ ಅನಿವಾರ್ಯವಾಗಿದೆ. ಹೀಗಾಗಿ ಕಾನೂನು ವಿದ್ಯಾರ್ಥಿಗಳಿಗೆ ಸಾಗರದಷ್ಟು ಅವಕಾಶಗಳಿವೆ. ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ವಿದ್ಯಾರ್ಥಿ ಜೀವನ ಉತ್ತಮವಾದ ವೇದಿಕೆಯಾಗಿದೆ; ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ರಜಿಸ್ಟರ್ (ಮೌಲ್ಯಮಾಪನ) ಪ್ರೊ. ಡಾ. ರತ್ನಾ ಭರಮಗೌಡರ ಅಭಿಪ್ರಾಯ ಪಟ್ಟರು.
ನಗರದ ಪ್ರತಿಷ್ಠಿತ ರಾಜಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಜಿಮಖಾನಾ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ವಿಗಳಾಗಲು ಉತ್ತಮ ಸಮಯ ನಿರ್ವಹಣೆಯೇ ಮೂಲ ಮಂತ್ರವಾಗಿದೆ. ವಿದ್ಯಾರ್ಥಿಗಳು ಸದಾ ಕಾಲ ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅಭ್ಯಸಿಸಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುವ ಮೂಲಕ ಪ್ರತಿ ಹಂತದಲ್ಲೂ ಬಡವರ ಹಾಗೂ ನಿಸ್ಸಹಾಯಕರ ಧ್ವನಿಯಾಗಬೇಕು ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್. ಹವಾಲ್ದಾರ್ ಅವರು, ಪ್ರತಿ ಹಂತದಲ್ಲೂ ಮಾನವನ ಕ್ರಿಯೆಗಳನ್ನು ಕಾನೂನು ನಿರ್ವಹಿಸುತ್ತದೆ. ರಾಷ್ಟ್ರದಲ್ಲಿ ಕಾನೂನೇ ಸಾರ್ವಭೌಮ. ಮೇರು ವ್ಯಕ್ತಿತ್ವಕ್ಕೆ ಜ್ಞಾನವೇ ಮೆರಗು. ಜ್ಞಾನವೇ ಮನುಷ್ಯನ ನಿಜವಾದ ಸಂಪತ್ತು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಜಿಮಖಾನ ಒಕ್ಕೂಟದ ಅಧ್ಯಕ್ಷ ಪ್ರೊ. ಡಾ. ಪ್ರಸನ್ನ ಕುಮಾರ್ ದರೋಜಿ ಸಭಿಕರಿಗೆ ಕಾಲೇಜಿನ ಇತಿಹಾಸ ಹಾಗೂ ಸಾಧನೆಯನ್ನು ವಿವರಿಸಿದರು. ಸಹಾಯಕ ದೈಹಿಕ ಉಪನ್ಯಾಸಕ ಅಮಿತ್ ಜಿ ಜಾಧವ್ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಕ್ಷಮಾ ಭಟ್ ಮತ್ತು ತೇಜಸ್ವಿನಿ ಸಂಶಾಳೆ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸೃಷ್ಟಿ ಹಾಗೂ ವೈಷ್ಣವಿ ನಿರೂಪಿಸಿ, ಉಪನ್ಯಾಸಕರಾದ ಪ್ರಸನ್ನ ಕುಮಾರ ಸ್ವಾಗತಿಸಿ, ವಿದ್ಯಾರ್ಥಿ ಆದರ್ಶ ವಂದಿಸಿದರು.
Join The Telegram | Join The WhatsApp |