ಬೆಂಗಳೂರು : ನಾನು ಗೃಹ ಸಚಿವನಾಗಿದ್ದಾಗ ಬಜರಂಗದಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ಹಾಕಿಸಿದ್ದೆ ಎನ್ನುವ ವಿಪಕ್ಷ ನಾಯಕ ಆರ್​. ಅಶೋಕ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕೆಂಡಾಮಂಡಲವಾಗಿದ್ದು, ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್​ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಪತ್ರ ಬರೆದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್​.ಅಶೋಕ್​, ಬಜರಂಗ ದಳದ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆಶೋಕ್, ರಾಮನಗರದ ವಕೀಲರು ಜ್ಞಾನವಾಪಿ ದೇಗುಲ ಬಗ್ಗೆ ಪೋಸ್ಟ್ ಮಾಡಿದ್ದರು. ಆ ವಿಚಾರವಾಗಿ ಪ್ರಸ್ತಾಪಿಸಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಹೇಳಿದರು. ಈ ಮೂಲಕ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ಮುಂದೆ ಮಂಡಿಯೂರಿದರು.

ನಾನು ಗೃಹಸಚಿವನಾಗಿದ್ದಾಗ ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಕೇಸ್ ಹಾಕಿಸಿದ್ದೆ ಎನ್ನುವ ಹೇಳಿಕೆಯಿಂದ ಅಶೋಕ್ ವಿರುದ್ಧ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಬಜರಂಗದಳ ಒತ್ತಾಯಿಸಿತ್ತು. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಆರ್.ಅಶೋಕ್​ರನ್ನು ವಿಪಕ್ಷ ನಾಯಕ ಸ್ಥಾನದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ. ಆರ್.ಅಶೋಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದವು.

ಅಶೋಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಶರಣ್ ಪಂಪ್‌ವೆಲ್ :
ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ ಹಿಂದೂ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಅಂತ ಹೇಳಿದ್ದಾರೆ. ವಿಹೆಚ್‌ಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಗೋ ಮಾತೆ, ಮಹಿಳೆಯರ ಪರ ಕೆಲಸ ಮಾಡೋ ಸಂಘಟನೆ ಅಂತ‌ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿರುವುದಾಗಿ ಹೇಳಿದ್ದು ಮನಸ್ಸಿಗೆ ಬೇಸರ ಆಗಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅಶೋಕ್ ಅವರನ್ನು ವಿಪಕ್ಷ ನಾಯಕರ ಸ್ಥಾನದಿಂದ ತೆಗೆಯಬೇಕು. ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಅಶೋಕ್ ನಮ್ಮದೇ ವೈಚಾರಿಕ ಇರುವ ಪಕ್ಷದವರು. ಅವರ ಸಮರ್ಥನೆ ಸರಿಯಲ್ಲ. ಹಿಂದೂ ವಿರೋಧಿ ಹೇಳಿಕೆ ಸರಿಯಲ್ಲ. ಶಿಕ್ಷಕಿ ಮೇಲೆ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅದು ಬಿಟ್ಟು ಹಿಂದೂ ಸಂಘಟನೆ ಮೇಲೆ ಕ್ರಮ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಇದು ಸರಿಯಲ್ಲ. ಕೇಂದ್ರದ ನಾಯಕರನ್ನೂ ಭೇಟಿಯಾಗುತ್ತೇವೆ. ಪತ್ರದ ಮೂಲಕ ಅಶೋಕ್ ವಿರುದ್ಧ ದೂರು ನೀಡಲಿದ್ದೇವೆ ಎಂದರು.

ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಎಫ್‌ಐಆರ್ ಹಾಕಿರುವ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದರು. ಈ ವೇಳೆ, “ಮಂಗಳೂರು ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಇದೇ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಧರಣಿ ನಡೆದು, ದೊಡ್ಡ ಗಲಾಟೆಯೇ ಆಗಿತ್ತು. ಅವತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನನ್ನ ಮೇಲೆ ಭಾರೀ ಒತ್ತಡವಿತ್ತು. ಫೋನ್‌ಗಳು ಕೂಡ ಬಂದಿತ್ತು. ಆದರೂ ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ವೇಳೆ ಯುವತಿಯರ ಮೇಲೆ ದೌರ್ಜನ್ಯ ಎಸಗಿ ಬಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ಆ ಥರ ನೀವೂ ಕೂಡ ಕ್ರಮ ಕೈಗೊಳ್ಳಿ” ಎಂದು ಗೃಹ ಸಚಿವ ಪರಮೇಶ್ವರ್​ಗೆ​ ಆಗ್ರಹಿಸಿದ್ದರು.

ಈ ಮೂಲಕ ತಾವು ಗೃಹ ಸಚಿವರಾಗಿದ್ದಾಗ ಹೇಗೆ ಇದ್ದೆ ಎನ್ನುವುದನ್ನು ತೋರಿಸಿಕೊಳ್ಳುವ ಭರದಲ್ಲಿ ಬಜರಂಗ ದಳ ವಿರುದ್ಧ ಗುಂಡಾ ಕೇಸ್ ಹಾಕಿದ್ದೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಹೇಳಿಕೆ ವಿಪಕ್ಷ ನಾಯಕ ಆರ್ ಅಶೋಕ್​ಗೆ ತಿರುಗು ಬಾಣವಾಗಿದ್ದು, ಅಶೋಕ್​ ವಿರುದ್ಧ ಬಜರಂಗದಳ ಕೆಂಡಾಮಂಡಲವಾಗಿತ್ತು. ಇದೀಗ ಕ್ಷಮೆ ಕೇಳುವ ಮೂಲಕ ಅಶೋಕ್ ಹಿಂದೂ ಸಂಘಟನೆಗಳ ಮುಂದೆ ಮಂಡಿಯೂರಿದ್ದಾರೆ.

ಅಶೋಕ್ ಅವರು ವಿಧಾನ ಸಭೆ ಅಧಿವೇಶನದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದಿದ್ದಾರೆ. ಈ ಮೂಲಕ ಸಂಘಟನೆಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ಅವರನ್ನು ತಕ್ಷಣ ವಿಪಕ್ಷ ನಾಯಕ ಸ್ಥಾನದಿಂದ ಇಳಿಸಬೇಕು. ಅವರು ಕೂಡಲೇ ರಾಜ್ಯದ ಹಿಂದೂ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ