Join The Telegram | Join The WhatsApp |
ಮುಂಬೈ :
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಇದೀಗ ಟೀಕೆಗೆ ಗುರಿಯಾಗಿದೆ.
ಸಾವರ್ಕರ್ ಮೊಮ್ಮಗ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಯು ಮಹಾ ವಿಕಾಸ್ ಅಘಾಡಿ ಮೈತ್ರಿ ಬಿರುಕಿಗೆ ಕಾರಣವಾಗಬಹುದು. ಭಾರತ್ ಜೋಡೋ ಯಾತ್ರೆ ಮೂಲಕ ಉತ್ತಮ ಕೆಲಸ ಮಾಡುತ್ತಿರುವ ಅವರು ಸಾವರ್ಕರ್ ವಿಷಯ ತೆಗೆಯುವ ಅಗತ್ಯವಿಲ್ಲ ಎಂದು ಉದ್ದವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆ ಬಣದ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿಕೆಯಿಂದ ಎಂವಿಎ ಮೈತ್ರಿ ಕುಸಿಯುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಂವಿಎ ಕುಸಿಯುವುದಿಲ್ಲ. ಆದರೆ ಇದು ನಿಸ್ಸಂಶಯವಾಗಿ ಕಹಿಯನ್ನು ಉಂಟು ಮಾಡುತ್ತದೆ. ನಮ್ಮ ಮೈತ್ರಿಯಲ್ಲಿ ಬಿರುಕುಗಳು ಉಂಟಾಗುತ್ತವೆ. ಅದು ಒಳ್ಳೆಯ ಸಂಕೇತವಲ್ಲ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ರಾಹುಲ್ ಅವರ ಭಾರತ್ ಜೋಡೋ ಯಾತ್ರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಯಾತ್ರೆಯು ದೇಶದಲ್ಲಿ ನಡೆಯುತ್ತಿರುವ ದ್ವೇಷವನ್ನು ಕೊನೆಗೊಳಿಸಲು ಮತ್ತು ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಧ್ವನಿ ಎತ್ತುವ ಗುರಿಯನ್ನು ಹೊಂದಿದೆ. ಅವರು ಈ ಸಮಸ್ಯೆಗಳನ್ನು ಸರಿಯಾಗಿ ಮುನ್ನಲೆಗೆ ತಂದಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುವ ಮೂಲಕ ರಾಷ್ಟ್ರದ ಆತ್ಮಸಾಕ್ಷಿಯನ್ನು ಕಲಕುತ್ತಿರುವಾಗ, ಸಾವರ್ಕರ್ ವಿಷಯವನ್ನು ಎತ್ತುವ ಅಗತ್ಯವೆಲ್ಲಿತ್ತು? ಅವರು ಅದನ್ನು ನಿರ್ಲಕ್ಷಿಸಿ ಅವರು ಮಾಡುತ್ತಿರುವ ಉತ್ತಮ ಕೆಲಸದತ್ತ ಗಮನ ಹರಿಸಬೇಕಿತ್ತು ಎಂದು ರಾವತ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಾವರ್ಕರ್ ಕ್ಷಮೆ ಕೇಳಿದುದರ ಬಗ್ಗೆ ಮಾತನಾಡಿದ್ದಾರೆ. ಅದನ್ನು ಪುನಃ ಪುನಃ ಹೇಳುವ ಅಗತ್ಯವಿಲ್ಲ. ದ್ವೇಷ ಕೊನೆಗೊಳಿಸಬೇಕೆಂದು ಹೇಳುವ ಅವರು ಸಾವರ್ಕರ್ ಮೇಲೆಕೆ ಕೋಪ ಹೊಂದಿದ್ದಾರೆ? ನಮಗೆ ಸಾವರ್ಕರ್ ಆರಾಧ್ಯ ದೈವವಾಗಿದ್ದಾರೆ. ನಾವು ಸಾವರ್ಕರ್ ಅವರನ್ನು ಪ್ರೀತಿಸುತ್ತೇವೆ, ಮೆಚ್ಚುತ್ತೇವೆ ಮತ್ತು ಅಪಾರ ನಂಬಿಕೆ ಹೊಂದಿದ್ದೇವೆ. ಹಾಗಾಗಿ ನಾವು ರಾಹುಲ್ ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
Join The Telegram | Join The WhatsApp |