ಮುಂಬೈ :
ಕಳೆದ 55 ವರ್ಷಗಳಿಂದ ಕಾಂಗ್ರೆಸ್ ಜೊತೆ ನಂಟು ಹೊಂದಿದ್ದ ದಿಯೋರಾ ಮನೆತನದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮಿಲಿಂದ ದಿಯೋರಾ ಕೊನೆಗೂ ಕಾಂಗ್ರೆಸ್ ತೊರೆದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಶಿವಸೇನೆ ಸೇರಿದ್ದಾರೆ.

ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ
ಮಿಲಿಂದ ದಿಯೋರಾ ಭಾನುವಾರ ಶಿವಸೇನೆ ಸೇರ್ಪಡೆಗೊಂಡಿದ್ದಾರೆ. ನಂತರ ಮಾತನಾಡಿದ ಅವರು, ಇಂದು ನನ್ನ ಜೀವನದಲ್ಲಿ ಅತ್ಯಂತ ಭಾವುಕ ಕ್ಷಣ ಅನುಭವಿಸುತ್ತಿದ್ದೇನೆ. ನಾನು ಅಭಿವೃದ್ಧಿಯ ಪಥ ಹಿಡಿದಿದ್ದೇನೆ. ನಾನು ಎಂದಿಗೂ ಕಾಂಗ್ರೆಸ್ ತೊರೆಯುವ ಕಲ್ಪನೆ ಮಾಡಿರಲಿಲ್ಲ. ಆದರೆ ಜನಸೇವೆ, ಅಭಿವೃದ್ಧಿಯ ಕಾರಣದಿಂದ ಕಾಂಗ್ರೆಸ್ ತೊರೆದು ಶಿವಸೇನೆ ಸೇರುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸುತ್ತಿದೆ. ಅಂದೇ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ.