ಬೆಳಗಾವಿ :
ಕಳೆದ 27 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ಅಗಾಧವಾದ ಸಾಧನೆಗೈದಿದೆ. ಪ್ರಸ್ತುತ 29 ಡಿಸೆಂಬರ್ 2023ರಂದು ಜರುಗಿದ ಚುನಾವಣೆಯಲ್ಲಿ ನೂತನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ತಮ್ಮ ಸಾಂಘಿಕ ಶಕ್ತಿಗೆ ನಿಚ್ಚಳ ನಿದರ್ಶನವೆನಿಸಿದ್ದಾರೆ.

ಚುನಾವಣಾಧಿಕಾರಿ ಕಲಾವತಿ ಮನಗೂಳಿ ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯ ಹೆಸರನ್ನು ಘೋಷಿಸಿದರು.
ಸೋಮವಾರ 8.1.2024 ರಂದು ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಡಾ.ಪ್ರೀತಿ ಕೆ.ದೊಡವಾಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹಿಂದಿನ ಅಧ್ಯಕ್ಷರಾಗಿದ್ದ ಆಶಾ ಪ್ರಭಾಕರ ಕೋರೆಯವರು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹಿಂದಿನ ಉಪಾಧ್ಯಕ್ಷರಾಗಿದ್ದ ಸುಧಾ ಕೌಜಲಗಿ ನೂತನ ಉಪಾಧ್ಯಕ್ಷೆ ರೂಪಾ ಜೆ.ಮುನವಳ್ಳಿಯವರಿಗೆ ಹಸ್ತಾಂತರಿಸಿದರು.
ನೂತನ ಆಡಳಿತ ಮಂಡಳಿ:
1. ಡಾ.ಪ್ರೀತಿ ಕೆ.ದೊಡವಾಡ (ಅಧ್ಯಕ್ಷರು)
2. ರೂಪಾ ಜೆ. ಮುನವಳ್ಳಿ (ಉಪಾಧ್ಯಕ್ಷರು)
3. ಆಶಾ ಪಿ. ಕೋರೆ (ನಿರ್ದೇಶಕರು)
4. ಸುವರ್ಣಲತಾ ಎನ್. ಬನ್ಸೋಡೆ (ನಿರ್ದೇಶಕರು)
5. ರಾಜೇಶ್ವರಿ ಎಂ.ಕವಟಗಿಮಠ (ನಿರ್ದೇಶಕರು)
6. ಅರುಂಧತಿ ಎ. ಪಟ್ಟೇದ (ನಿರ್ದೇಶಕರು)
7. ದೀಪಾ ಎಸ್.ಮುನವಳ್ಳಿ( ನಿರ್ದೇಶಕರು)
8.ಪೂಜಾ ಕೆ.ಸಾಧುನವರ (ನಿರ್ದೇಶಕರು )
9.ಕೀರ್ತಿ ಜೆ. ಮೆಟಗುಡ್ಡ (ನಿರ್ದೇಶಕರು )
10. ಸೀಮಾ ಪಿ. ಬಾಗೇವಾಡಿ (ನಿರ್ದೇಶಕರು )
11. ಗಿರಿಜಾ ಎಂ. ಕೌಜಲಗಿ (ನಿರ್ದೇಶಕರು )
12. ಡಾ.ಪುಷ್ಪಾ ವಿ. ಮಮದಾಪುರ (ನಿರ್ದೇಶಕರು)
ವೃತ್ತಿಪರ ನಿರ್ದೇಶಕರಾಗಿ
13.ಜ್ಯೋತಿ ಜಿ.ಮಠದ (ಚಾರ್ಟರ್ಡ ಅಕೌಂಟಂಟ್)
14..ಬೀನಾ ಜಿ. ಆಚಾರ (ವಕೀಲರು)

ಈ ಸಂದರ್ಭದಲ್ಲಿ ಜರುಗಿದ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕಿ ರಾಜೇಶ್ವರಿ ಕವಟಗಿಮಠ ಮಾತನಾಡಿ, ಬೆಳಗಾವಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ನ್ನು ಕಳೆದ 27 ವರ್ಷಗಳಲ್ಲಿ ಉತ್ಕೃಷ್ಟವಾಗಿ ಕಟ್ಟಿಬೆಳೆಸಿದ ಶ್ರೇಯಸ್ಸು ಆಶಾ ಕೋರೆಯವರದು. ಅವರ ಅವಿರತ ಪ್ರಯತ್ನದ ಫಲವಾಗಿ ರಾಜ್ಯಮಟ್ಟದಲ್ಲಿಯೂ ಅತ್ಯುತ್ತಮ ಸಹಕಾರಿ ಮಹಿಳಾ ಬ್ಯಾಂಕ್ ಎಂಬ ಅಭಿದಾನಕ್ಕೂ ಭಾಜನವಾಗಿರುವುದು ಕ್ರಿಯಾಶೀಲ ಅಧ್ಯಕ್ಷೆ ಆಶಾ ಕೋರೆಯವರಿಂದ. ಅಂತೆಯೇ ಅವರಿಗೆ ಅನುಪಮ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತವು ‘ಸಹಕಾರ ರತ್ನ’ ಪ್ರಶಸ್ತಿಯನ್ನು ಹಾಗೂ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿಗೆ ‘ಅತ್ಯುತ್ತಮ ಸಹಕಾರಿ ಬ್ಯಾಂಕ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆಶಾ ಕೋರೆಯವರ ಆದರ್ಶದ ವ್ಯಕ್ತಿತ್ವ, ಅವರ ಒಳ್ಳೆಯ ಗುಣಗಳು, ಅವರು ಸಂಸ್ಥೆಯನ್ನು ಮುನ್ನಡೆಸುವ ರೀತಿ ನನಗೆ ಆದರ್ಶವೆನಿಸಿದೆ. ಅವರ ಮಾರ್ಗದರ್ಶನದಂತೆ ನಾವು ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಯಲ್ಲಿ ದುಡಿಯುವುದಾಗಿ ತಿಳಿಸಿದರು.

ಇನೋರ್ವ ನಿರ್ದೇಶಕಿ ಅರುಂಧತಿ ಪಟ್ಟೇದ ಮಾತನಾಡಿ, ಮಾಜಿ ಅಧ್ಯಕ್ಷೆ ಆಶಾ ಕೋರೆ, ಮಾಜಿ ಉಪಾಧ್ಯಕ್ಷೆ ಸುಧಾ ಎಸ್.ಕೌಜಲಗಿಯವರು ಆದರ್ಶಮಯ ವ್ಯಕ್ತಿಯಾಗಿ, ತಾಯಿಯಾಗಿ ನನಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನನಗೆ ಬ್ಯಾಂಕಿನಲ್ಲಿ ಗೌರವಾನ್ವಿತ ಸ್ಥಾನ ನೀಡಿದ್ದಕ್ಕೆ ಚಿರಋಣಿ. ಆಶಾ ಅವರ ಘನ ಅಧ್ಯಕ್ಷತೆಯಲ್ಲಿ ಇಂದು ಬ್ಯಾಂಕ್ 8 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವರಿಬ್ಬರ ಸಲಹೆಯಂತೆ ಪ್ರಸ್ತುತ ಬ್ಯಾಂಕಿನ ಬೆಳವಣಿಗೆಯಲ್ಲಿ ಶ್ರಮಿಸುತ್ತೇವೆಂದು ಹೇಳಿದರು.

ಮಾಜಿ ಅಧ್ಯಕ್ಷೆ ಆಶಾ ಕೋರೆ ಮಾತನಾಡಿ, ಸತತ ಇಪ್ಪತ್ತೇಳು ವರ್ಷ ವರೆಗೆ ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡಿ ಬ್ಯಾಂಕಿನ ಬೆಳವಣಿಗೆಯಲ್ಲಿ ಎಲ್ಲರೂ ಸಹಕರಿಸಿದ್ದನ್ನು ನಾನೆಂದು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ, ಹೊಸ ಪೀಳಿಗೆ ನೂತನ ಪಥದಲ್ಲಿ ಮುನ್ನಡೆದು ಇನ್ನಷ್ಟು ಉದ್ಯೋಗಾವಕಾಶಗಳನ್ನು ಮಹಿಳೆಯರಿಗೆ ಕಲ್ಪಿಸಬೇಕು. ಬ್ಯಾಂಕಿನ್ ಧ್ಯೇಯವನ್ನು ಅನುಷ್ಠಾನಗೊಳಿಸಿ ಬ್ಯಾಂಕಿನ ಬೆಳವಣಿಗೆಯಲ್ಲಿ ಸಹಕರಿಸಿ. ಈ ನಿಟ್ಟನಲ್ಲಿ ನನ್ನ ಮಾರ್ಗದರ್ಶನ ಸದಾ ಇರುತ್ತದೆ ಎಂದು ಹೇಳಿದರು.
ಡಾ.ಪ್ರಭಾಕರ ಕೋರೆಯವರು ಮಾತನಾಡಿ, ಇರ್ವ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮತವಾಗದ ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ಆರ್ಥಿಕವಾಗಿ ಬೆಳೆಯಬೇಕು. ಈ ಬ್ಯಾಂಕ್‌ನ ಸರ್ವತೋಮುಖದ ಬೆಳವಣಿಗೆಗೆ ಆಶಾ ಕೋರೆಯವರು ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಸಲ್ಲಿಸಿರುವ ಕೊಡುಗೆ ಅನುಪವೆನಿಸಿದೆ. ಮುಂಬರುವ ದಿನಗಳಲ್ಲಿಯೂ ಒಗ್ಗಟ್ಟಿನಿಂದ ಈ ಬ್ಯಾಂಕ್‌ನ್ನು ವಿಸ್ತಾರೋನ್ನತವಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ಹೇಳಿ ಸರ್ವ ಸದಸ್ಯರಿಗೆ ಅಭಿನಂದಿಸಿ ಶುಭ ಕೋರಿದರು.

ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ಬ್ಯಾಂಕ್ ಪ್ರಾರಂಭದಿಂದ ಇಂದಿನವರೆಗೂ ಅತ್ಯುತ್ತಮವಾಗಿ ಬೆಳೆದುಬಂದಿದೆ. ಇಂದು ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ ಅವುಗಳನ್ನು ಸಾಂಘಿಕವಾಗಿ ಎಲ್ಲರೂ ಎದುರಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಹಕಾರಿಯನ್ನು ಕೊಂಡೊಯ್ಯಬೇಕೆಂದು ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಲ್ಲ ನಿರ್ದೇಶಕರು ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.
ಬ್ಯಾಂಕ್ ಸಾಗಿ ಬಂದ ಇತಿಹಾಸ : ಇಂದು ಬೆಳಗಾವಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಸಹಕಾರಿ ಬ್ಯಾಂಕ್‌ಗಳಲ್ಲಿ ಪ್ರಚಲಿತ ಹೆಸರು ‘ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ನಿ. ಬ್ಯಾಂಕ್’ ಒಂದು. ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಬ್ಯಾಂಕ್ ಹಲವು ಹತ್ತು ಪ್ರಥಮ ಹೆಜ್ಜೆಗಳಿಗೆ ಸಾಕ್ಷಿಯಾಗಿ ನಿಂತಿದೆ.
ಭಾರತೀಯ ರಿಜರ್ವ್ ಬ್ಯಾಂಕಿನಿಂದ ಅನುಮತಿಯನ್ನು ಹೊಂದಿರುವ ಮಹಿಳಾ ಸಹಕಾರಿ ಬ್ಯಾಂಕ್ ಮಹಿಳೆಯರ ಸ್ವಾವಲಂಬಿ ಬದುಕನ್ನು ಪ್ರೇರೇಪಿಸಿದೆ. ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವ ಮೂಲಕ ಮಹಿಳೆಯರ ಬದುಕನ್ನು ಪ್ರೇರೇಪಿಸಿದ ಶ್ರೇಯಸ್ಸು ರಾಣಿ ಚನ್ನಮ್ಮಾ ಮಹಿಳಾ ಬ್ಯಾಂಕ್‌ಗೆ ಸಲ್ಲುತ್ತದೆ. ಮಹಿಳೆಯರ ಬದುಕನ್ನು ಸದೃಢಗೊಳಿಸುವ ನಿಟ್ಟಿನಲ್ಲಿಯೇ ಅಸ್ತಿತ್ವಕ್ಕೆ ಬಂದದ್ದು ಮಹಿಳಾ ಬ್ಯಾಂಕಿನ್ ಹಿರಿಮೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಸಮರ್ಥ ಮಾರ್ಗದರ್ಶನ ಹಾಗೂ ಪರಿಶ್ರಮದ ಫಲವಾಗಿ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ 24.12.1996 ರಂದು ಪ್ರಾರಂಭಗೊಂಡಿತು. ಆಶಾ ಪ್ರಭಾಕರ ಕೋರೆಯವರು ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ ಅವರ ಸಮರ್ಥ ನೇತೃತ್ವದಲ್ಲಿ ಬ್ಯಾಂಕ್ ವಿಸ್ತಾರೋನ್ನತವಾಗಿ ಬೆಳೆದಿದೆ.
ಆರಂಭದ ದಿನಗಳಲ್ಲಿ ಮಹಿಳಾ ಬ್ಯಾಂಕ್ 3036 ಸದಸ್ಯರ ಬಲವನ್ನು ಒಳಗೊಂಡಿತ್ತು. 32.09 ಲಕ್ಷ ಷೇರು ಹಾಗೂ 18.60 ಲಕ್ಷ ಠೇವಣಿಯೊಂದಿಗೆ ತನ್ನ ಅಭಿಯಾನಕ್ಕೆ ಚಾಲನೆ ನೀಡಿತ್ತು. ತನ್ನ ನಿರಂತರ ದುಡಿಮೆ ಹಾಗೂ ಪರಿಶ್ರಮದ ಫಲಪ್ರದವಾಗಿ ಸದ್ಯ ಬ್ಯಾಂಕ್ 5733 ಸದಸ್ಯರ ಸಂಖ್ಯಾಬಲವನ್ನು ಹೊಂದಿದೆ. ಅದರಂತೆ 6.12 ಕೋಟಿಗಳ ಷೇರುಗಳೊಂದಿಗೆ 373.97 ಕೋಟಿ ರೂ.ಗಳ ಠೇವಣಿಯನ್ನು ಹೊಂದಿರುವುದು ವಿಶೇಷ. ಪ್ರಸಕ್ತ ಸಾಲಿನಲ್ಲಿ 6.56 ಕೋಟಿ ನಿವ್ವಳ ಲಾಭವನ್ನು ಹೊಂದಿರುವುದು ಬ್ಯಾಂಕ್‌ನ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ. ಅಂತೆಯೆ 215.12 ಕೋಟಿ ರೂ.ಗಳ ಸಾಲಗಳನ್ನು ನೀಡಿದೆ. ಮಹಿಳಾ ಬ್ಯಾಂಕಿನ್ ಪ್ರಧಾನ ಕಚೇರಿ ಬೆಳಗಾವಿಯ ಕಾಲೇಜು ರಸ್ತೆಯಲ್ಲಿದ್ದು ಸದ್ಯ ಬೆಳಗಾವಿಯ ನೆಹರುನಗರ, ಕುವೆಂಪುನಗರ, ಬಿ.ಎಂ.ಕಂಕಣವಾಡಿ ಆಸ್ಪತ್ರೆ, ಜಿಲ್ಲೆಯ ಸವದತ್ತಿ, ಅಥಣಿ, ಚಿಕ್ಕೋಡಿ ತಾಲೂಕುಗಳಲ್ಲಿ ಹಾಗೂ ಹುಬ್ಬಳ್ಳಿ ಸೇರಿ 8 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.
ಲಾಭಾಂಶ ಒಂದನ್ನೇ ತನ್ನ ಗುರಿಯನ್ನಾಗಿಟ್ಟುಕೊಳ್ಳದೆ, ಗ್ರಾಹಕರ ಬೇಕುಬೇಡಿಕೆಗಳಿಗೆ ಸ್ಪಂದಿಸಿದೆ. ಇಂದಿನ ವಿದ್ಯಮಾನಗಳಿಗೆ ಅನುಗುಣವಾಗಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದೆ. ತನ್ನ ಗ್ರಾಹಕರಿಗೆ ಯಾವುದೇ ವಿಧದ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡಿದೆ. ಎಲ್ಲವೂ ಗಣಕೀತೃತಗೊಳಿಸಿರುವ ಬ್ಯಾಂಕ್ ಇ-ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸಿದೆ. ಕೋರ್ ಬ್ಯಾಂಕಿಂಗ್, ಎಸ್‌ಎಂಎಸ್ ಸೌಲಭ್ಯ, ಆರ್‌ಟಿಜಿಎಸ್ / ಎನ್‌ಇಎಫ್‌ಟಿ / ಡಿಡಿ ದಂತಹ ಹಲವಾರು ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ. ಅದೇ ರೀತಿ ತನ್ನ ಗ್ರಾಹಕರಿಗೆ ಎಟಿಎಂ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಪ್ರತಿಷ್ಠಿತ ಬ್ಯಾಂಕ್‌ಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ಇದೆಲ್ಲದಕ್ಕೂ ಕಾರಣ ಕ್ರಿಯಾಶೀಲ ಹಿಂದಿನ ಅಧ್ಯಕ್ಷರಾಗಿದ್ದ ಆಶಾ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯವರ ಮುಂದಾಲೋಚನೆ ಹಾಗೂ ಸಿಬ್ಬಂದಿವರ್ಗದವರ ದಣಿವರಿಯದ ದುಡಿಮೆ ಫಲ ಮಹಿಳಾ ಬ್ಯಾಂಕ್ ರಾಜ್ಯದಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಟ್ಟಿದೆ.