
ಉಡುಪಿ : ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಭಾರತದ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ತಮ್ಮ ಕುಟುಂಬದ ಮೂಲ ಸ್ಥಾನವಾದ ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಾಗಸನ್ನಿಧಿಗೂ ವಿಶೇಷ ಪೂಜೆ ಸಲ್ಲಿಸಿದರು.
ಹಲವು ವರ್ಷಗಳಿಂದ ಮಕ್ಕಳಾಗದೇ ಇದ್ದಾಗ 2007ರಲ್ಲಿ ರವಿಶಾಸ್ತ್ರಿ ದಂಪತಿ ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿ ನಾಗಬನದಲ್ಲಿ ಪೂಜೆಗೈದಿದ್ದರು. ಇದಾದ ಮರು ವರ್ಷವೇ ಈ ದಂಪತಿಗೆ ಮಗುವಾಯಿತು. ಇದರ ನಂತರದಿಂದ ರವಿ ಶಾಸ್ತ್ರಿ ಅವರು ವರ್ಷಕ್ಕೊಮ್ಮೆ ಭೇಟಿ ನೀಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಲೇ ಬರುತ್ತಿದ್ದಾರೆ.
ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ ಮಾಡಿಸಿದರು.
’13 ವರ್ಷಗಳಿಂದ ಪ್ರತಿವರ್ಷ ಕರ್ವಾಲು ಕ್ಷೇತ್ರಕ್ಕೆ ಬರುತ್ತಿದ್ದೇನೆ. ಇಲ್ಲಿಗೆ ಬಂದಾಗ ನನ್ನ ಮನಸ್ಸಿಗೆ ನೆಮ್ಮದಿ ಹಾಗೂ ದೇವರ ಅನುಗ್ರಹ ಪ್ರಾಪ್ತವಾಗಿದೆ’ ಎಂದರು.
ದೇವಸ್ಥಾನದ ವತಿಯಿಂದ ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ನವೀಕರಣ ಕಾರ್ಯನಡೆಯುತ್ತಿದ್ದು, ದೇವಸ್ಥಾನದ ರಸ್ತೆಯಲ್ಲಿ ಸ್ವಾಗತ ಗೋಪುರ ನಿರ್ಮಿಸುವಂತೆ ದೇವಾಲಯ ವತಿಯಿಂದ ಶಾಸ್ತ್ರಿ ಅವರಿಗೆ ಮನವಿ ಮಾಡಲಾಯಿತು.
ರವಿ ಶಾಸ್ತ್ರೀ ಭೇಟಿ ನೀಡಿದ ವೇಳೆ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಪಟ್ಟಾಭಿ ರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಪ್ರಮುಖರಾದ ಸಂದೀಪ ಶೆಟ್ಟಿ, ಸುಧಾಕರ ಹೆಗ್ಡೆ, ಪ್ರಶಾಂತ ಶೆಟ್ಟಿ, ದಿಲೀಪ್ ಶೆಟ್ಟಿ, ತಂತ್ರಿಗಳಾದ ವರದರಾಜ ತಂತ್ರಿ, ಹರಿಶ್ಚಂದ್ರ ರಾವ್, ರವಿಶಾಸ್ತ್ರೀ ಕುಟುಂಬಸ್ಥರು ಉಪಸ್ಥಿತರಿದ್ದರು.
ರವಿ ಶಾಸ್ತ್ರಿಯವರ ಪೂರ್ವಜರು ಎರ್ಲಪಾಡಿಯ ಕರ್ವಾಲುಗೆ ಸೇರಿದವರು. ಮುಂಬೈಯಲ್ಲೇ ಬೆಳೆದ ರವಿಶಾಸ್ತ್ರಿ ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದರು.