ಬೆಂಗಳೂರು: ಜ್ಯೋತಿಷಿ ಸುರೇಂದ್ರ ಕುಮಾರ್‌ ಜೈನ್‌ (67) ಅವರು ಶುಕ್ರವಾರ ಸಂಜೆ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ, ಆರೋಗ್ಯದಲ್ಲಿ ಸುಧಾರಣೆ ಕಾಣಿಸಿ ಮನೆಗೆ ತೆರಳಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಾಲ್ಕು ದಿನಗಳ ಹಿಂದೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1957ರ ಅಕ್ಟೋಬರ್ 13ರಂದು ಜನಿಸಿದ್ದರು. ಶಿಕ್ಷಣ ಪಡೆದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರ ತಂದೆ ಬಿ.ಜಿ.ಶಶಿಕಾಂತ್ ಜೈನ್ ಸಹ ಜ್ಯೋತಿಷಿಯಾಗಿದ್ದರು. ಎಸ್‌.ಕೆ.ಜೈನ್‌ ಅವರು ಎಂಜಿನಿಯರ್‌ ಆಗಬೇಕೆಂದು ಬಯಸಿದ್ದರು. ನಂತರ, ಜ್ಯೋತಿಷ್ಯ ಕಲಿತು ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಎಸ್‌.ಕೆ.ಜೈನ್‌ ಎಂದೇ ಖ್ಯಾತರಾಗಿದ್ದರು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ದಿನ ಭವಿಷ್ಯ ಹಾಗೂ ರಾಶಿ ಫಲ ಹೇಳುತ್ತಿದ್ದರು.