Join The Telegram | Join The WhatsApp |
ಅಂಬೇಡ್ಕರ್ ಸ್ಪರ್ಧಾ ಪರೀಕ್ಷೆ ಪೋಸ್ಟರ್ ಬಿಡುಗಡೆ ಗೊಳಿಸಿದ ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ : ಡಾ. ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಡಾ.ಬಿ.ಆರ್ ಅಂಬೇಡರ್ ಕುರಿತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದೆ. ಸದರಿ ಪರೀಕ್ಷೆಯ ಪೋಸ್ಟರ್ ಅನ್ನು ಬೆಳಗಾವಿ ನಗರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಾದ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿ, ಪರೀಕ್ಷೆಗೆ ಶುಭ ಕೋರುತ್ತ “ಎಲ್ಲರೂ ಈ ವಿಶೇಷ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ಈ ಬಗ್ಗೆ ಮಾತನಾಡಿದ ಪರಿಷತ್ ರಾಜ್ಯ ಸಂಪರ್ಕಾಧಿಕಾರಿಗಳಾದ ಅಜಿತ್ ಮಾದರ್, ಪ್ರತಿ ವರ್ಷದಂತೆ ಈ ವರ್ಷವೂ ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. “ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಮೊದಲ ಮೂವರು ವಿಜೇತರಿಗೆ ಬಹುಮಾನ ಮೊತ್ತ ಹೆಚ್ಚಳ ಮಾಡಲಾಗಿದೆ. ಪ್ರಥಮ ಬಹುಮಾನ 5 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 2.5 ಲಕ್ಷ ರೂಪಾಯಿ, ತೃತೀಯ ಬಹುಮಾನ 1 ಲಕ್ಷ ರೂಪಾಯಿ ಇರಲಿದೆ” ಎಂದು ತಿಳಿಸಿದರು.
“ಅಷ್ಟೇ ಅಲ್ಲದೆ ಈ ಬಾರಿ ಜಿಲ್ಲಾ ಮಟ್ಟದಲ್ಲಿಯೂ 3 ಜನ ರ್ಯಾಂಕ್ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಪ್ರಥಮ ಬಹುಮಾನ 15 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 10 ಸಾವಿರ ರೂಪಾಯಿ, ತೃತೀಯ ಬಹುಮಾನ 5 ಸಾವಿರ ರೂಪಾಯಿ ಇರಲಿದೆ” ಎಂದು ಹೇಳಿದರು.
“ಪರೀಕ್ಷೆಗೆ ಜನವರಿ 7ರಿಂದ ನೋಂದಣಿ ಆರಂಭಿಸಲಾಗಿದ್ದು, ಫೆಬ್ರುವರಿ 28ರಂದು ಕೊನೆಯ ದಿನಾಂಕವಾಗಿರುತ್ತದೆ. 15ರಿಂದ 35 ವರ್ಷ ವಯೋಮಾನದ ವಿದ್ಯಾರ್ಥಿಗಳು, ಯುವಜನರು ವೆಬ್ ಸೈಟ್ https://thedvp.org/registration/- ಭೇಟಿ ನೀಡಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9380678859 ಅನ್ನು ಸಂಪರ್ಕಿಸಬಹುದು” ಎಂದು ಅವರು ಮಾಹಿತಿ ನೀಡಿದ್ದಾರೆ.
ನಾಡಿನ ಎಲ್ಲ ಸಮುದಾಯದ ವಿದ್ಯಾರ್ಥಿ ಯುವಜನರಿಗೆ ಅವಕಾಶ ಇರಲಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಪ್ರಶ್ನೆಗಳನ್ನೊಳಗೊಂಡ ಸ್ಪರ್ಧಾ ಪರೀಕ್ಷೆ ನಡೆಸುವ ಮೂಲಕ ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಅವರು ಹೇಳಿದರು.
ಕಳೆದ ಬಾರಿ ಈ ವಿನೂತನ ಪರೀಕ್ಷೆಯನ್ನು ನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ. ಈಗಾಗಲೇ ಹೋದ ವರ್ಷ ನಡೆದ ಪರೀಕ್ಷೆ ಬಿಡುಗಡೆ ಮಾಡಲಾಗಿದ್ದು, ವಿಜೇತರಿಗೆ ಇದೇ ತಿಂಗಳ 31 ರಂದು ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಸನ್ಮಾನಿಸಲಾಗುತ್ತಿದೆ. ಬಹುಮಾನ ವಿಜೇತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.thedvp.org ಗೆ ಭೇಟಿ ನೀಡಬಹುದು ಎಂದು ಅಜಿತ್ ಮಾದರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಮಾರುತಿ ಕೆಳಗೇರಿ, ಆಕಾಶ ಬೇವಿನಕಟ್ಟಿ ವಿಧ್ಯಾರ್ಥಿ ಬಂಧುತ್ವ ವೇದಿಕೆ ಬೆಳಗಾವಿ ಜಿಲ್ಲಾ ಸಂಚಾಲಕರು ಹಾಗೂ ಆಕಾಶ ಹಲಗೆಕರ ಯುವ ಮುಖಂಡರು ಹಾಗೂ ಇನ್ನೂಳಿದ ಮುಖಂಡರು ಉಪಸ್ಥಿತರಿದ್ದರು.
Join The Telegram | Join The WhatsApp |