
ನವದೆಹಲಿ: ಓಲಾ, ಉಬರ್ ಮಾದರಿಯಲ್ಲೇ, ದೇಶದಾದ್ಯಂತ ಸಹಕಾರ ವ್ಯವಸ್ಥೆಯಡಿಯಲ್ಲಿ ‘ಸಹಕಾರ್ ಟ್ಯಾಕ್ಸಿ’ ಸೇವೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಹಕಾರಿ ಖಾತೆ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ಹೊಸ ಸೇವೆಯಡಿಯಲ್ಲಿ ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಪ್ರಯಾಣಿಕರು ಪಾವತಿಸುವ ಹಣವು ನೇರವಾಗಿ ಚಾಲಕರಿಗೆ ಖಾತೆಗೆ ಸೇರಲಿದೆ’ ಎಂದು ತಿಳಿಸಿದರು.
ಈಗ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳು ಲಾಭಪಡೆಯುತ್ತಿದ್ದು, ‘ಸಹಕಾರ್ ಟ್ಯಾಕ್ಸಿ’ ವ್ಯವಸ್ಥೆಯಲ್ಲಿ ಚಾಲಕರಿಗೆ ಲಾಭದ ಹಣವೂ ವರ್ಗಾವಣೆಯಾಗಲಿದೆ.
ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಭವಿಷ್ಯದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳ ಬಳಕೆ ಹೆಚ್ಚಲಿದ್ದು, ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಪಾರಮ್ಯ ಹೊಂದಿವೆ. ಹೆಚ್ಚಿನ ದರ ವಿಧಿಸುವ ಮೂಲಕ ಚಾಲಕ-ಪ್ರಯಾಣಿಕರಿಗೂ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ‘ಸಹಕಾರ್ ಟ್ಯಾಕ್ಸಿ’ ಸೇವೆ ಆರಂಭಿಸಲು ನಿರ್ಧರಿಸಿದೆ ಎಂದು ತಿಳಿಸಿದರು.