ಘಟಪ್ರಭಾ :
ನಮ್ಮ ರಾಷ್ಟ್ರವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ ವಿಶ್ವದ ಏಕಮೇವ ರಾಷ್ಟ್ರವಾಗಿದೆ. ನೂರಾರು ಜಾತಿ-ಧರ್ಮಗಳಿದ್ದರೂ ಆಚರಣೆಗಳು ಮಾತ್ರ ಒಂದೇ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಸಂಗನಕೇರಿ ಪಟ್ಟಣದ ಹನಮಂತ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕøತಿ, ಆಚಾರ, ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಸಂಗನಕೇರಿ ಪಟ್ಟಣದ ಅಭಿವೃದ್ಧಿಗೆ ಕಳೆದ 20 ವರ್ಷಗಳಿಂದ ಸರ್ಕಾರದ ನಾನಾ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಮುಂದೆಯೂ ಸಹ ಈ ಪಟ್ಟಣದ ಅಭಿವೃದ್ಧಿಗೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ಇದೆ. ರಾಜ್ಯದಲ್ಲಿ ಈ ಹಿಂದೆ ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವುದಾಗಿ ಅವರು ತಿಳಿಸಿದರು.
ಈಗಾಗಲೇ ಹಿಡಕಲ್ ಜಲಾಶಯದಲ್ಲಿ 34 ಟಿಎಂಸಿ ನೀರು ಸಂಗ್ರಹವಿರುವುದರಿಂದ ಮುಂದಿನ ಬೇಸಿಗೆಯ ಕಾಲದವರೆಗೂ ನೀರನ್ನು ಬಳಕೆ ಮಾಡಬಹುದಾಗಿದೆ. ಘಟಪ್ರಭಾ ನದಿ ತೀರದ ರೈತರು ಈಗಿನಿಂದಲೇ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ದೇವರ ದಯೆಯಿಂದ ಇನ್ನೂ ಮಳೆಯಾದರೆ ರೈತರಿಗೆ ಮತ್ತಷ್ಟು ಖುಷಿ ತರುತ್ತದೆ. ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಅವರು ಹೇಳಿದರು.

ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಹನಮಂತ ದೇವರ ಕಾರ್ತಿಕೋತ್ಸವ ಕಮೀಟಿಯಿಂದ ಸತ್ಕರಿಸಲಾಯಿತು.

ಮುಖಂಡರಾದ ಬಸವರಾಜ ಮಾಳೇದವರ, ಅರ್ಜುನ ಚಿಕ್ಕೋಡಿ, ವಿಠ್ಠಲ ಶಿಂಗೋಟಿ, ನಾಗಪ್ಪ ಮಾಳೇದವರ, ಬಿ.ಟಿ. ಸಂಪಗಾಂವಿ, ಭೀಮಶಿ ಮಾಳ್ಯಾಗೋಳ, ಮಲಗೌಡ ಮಾಳ್ಯಾಗೋಳ, ದೊಡ್ಡಪ್ಪ ಸಂಪಗಾಂವಿ, ಮುತ್ತೆಪ್ಪ ಗದಾಡಿ, ಬಸಪ್ಪ ಮಾಳ್ಯಾಗೋಳ, ಗಿರೆಪ್ಪ ಶಿಂಗೋಟಿ, ಯಲ್ಲಪ್ಪ ನಿಂಗ್ಯಾಗೋಳ, ಕಾರ್ತಿಕೋತ್ಸವ ಕಮೀಟಿಯ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.