ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಸಚಿವ ಸತೀಶ ಜಾರಕಿಹೊಳಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀ‌ರ್ ಭೇಟಿಯಾಗಿದ್ದಾರೆ.

ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿಜಯೇಂದ್ರ-ಜಾರಕಿಹೊಳಿ ಭೇಟಿ ಆಗಿದ್ದಾರೆ.
ಇಬ್ಬರು ನಾಯಕರ ಭೇಟಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ, ಸಿಎಂ ಬದಲಾವಣೆಯ ಕೂಗು ಕೇಳಿಬಂದಿತ್ತು. ಅಲ್ಲಿವರೆಗೆ ಸೈಲೆಂಟ್ ಆಗಿದ್ದ ಸತೀಶ ಜಾರಕಿಹೊಳಿ ದಿಢೀ‌ರ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಇತ್ತ ಪರಮೇಶ್ವ‌ರ್ ಮತ್ತು ಸತೀಶ್ ಜಾರಕಿಹೊಳಿ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಬಳಿಕ ಮತ್ತೆ ಡಿಕೆ ಬ್ರದರ್ಸ್, ದೆಹಲಿಗೆ ತೆರುವ ಪ್ಲಾನ್‌ನಲ್ಲಿ ಇದ್ದಾರೆ ಎನ್ನಲಾಗಿದೆ. ಇದೀಗ ಸತೀಶ್ ಜಾರಕಿಹೊಳಿಯನ್ನು ಬಿವೈ ವಿಜಯೇಂದ್ರ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಇನ್ನು ತಮ್ಮ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು, ಶಿವಮೊಗ್ಗ-ಶಿಕಾರಿಪುರ ಮಾರ್ಗದಲ್ಲಿರುವ ಕುಟ್ರಳ್ಳಿ ಬಳಿ ಟೋಲ್ ಗೇಟ್ ತೆರವು ಮಾಡುವಂತೆ ಮನವಿ ಮಾಡಿದ್ದೇನೆ. ಈ ಟೋಲ್ ಬೇರೆಡೆ ಶಿಫ್ಟ್ ಮಾಡಲು ಮನವಿ ಮಾಡಿದ್ದೇವೆ. ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಬರುತ್ತವೆ. ಇದರಿಂದ ರೈತರಿಗೆ ಅನಾನುಕೂಲವಾಗಿದೆ. ಮಕ್ಕಳು ಶಾಲೆಗೆ ಹೋಗುವುದು ತೊಂದರೆ ಆಗಿದೆ. ಟೋಲ್ ಶಿಫ್ಟ್‌ಗೆ ಹೋರಾಟಗಳು ನಡೆದಿವೆ. ಸಚಿವರು ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದಾರೆ. ಶೀಘ್ರದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದಾರೆ.