ಬೆಂಗಳೂರು :
ವಿಧಾನ ಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆಬ್ರುವರಿ 16) 2024–25ನೇ ಆರ್ಥಿಕ ವರ್ಷದ ಬಜೆಟ್‌ ಮಂಡಿಸುವರು. ಉಳಿದ ಎಂಟು ದಿನಗಳ ಕಲಾಪದಲ್ಲಿ ಚರ್ಚೆಗೆ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಚನೆ ವಿರೋಧ ಪಕ್ಷಗಳಲ್ಲಿದೆ.

ಬರ ನಿರ್ವಹಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯ ಜತೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ‘ಕಮಿಷನ್‌’ ಆರೋಪ ಅಧಿವೇಶನದಲ್ಲಿ ಸದ್ದು ಮಾಡಬಹುದು. ವರ್ಷದ ಮೊದಲ ಅಧಿವೇಶನದಲ್ಲೇ ಸರ್ಕಾರದ ಮೇಲೆ ಮುಗಿಬೀಳುವ ಮೂಲಕ ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್‌ನ ವರ್ಚಸ್ಸು ಕುಂದಿಸುವ ತಂತ್ರಗಾರಿಕೆಯನ್ನು ವಿರೋಧ ಪಕ್ಷಗಳು ಹೆಣೆಯುತ್ತಿವೆ.