ಬಸ್ರೂರು : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯ ಪುಸ್ತಕಗಳ ಜ್ಞಾನ ಮಾತ್ರವಲ್ಲದೆ ವ್ಯವಹಾರಿಕ ಜ್ಞಾನವು ಬಹಳ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ “ಶಾರದಾ ವೈವಿಧ್ಯ 2025 ಎನ್ನುವ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮವನ್ನು  ಹಮ್ಮಿಕೊಂಡಿತ್ತು. ಒಂದೇ ವೇದಿಕೆಯಡಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

ಪಾಲಕರೊಡನೆ ಮಕ್ಕಳ ಭಾಂದವ್ಯ ವೃದ್ಧಿಗಾಗಿ “ಗ್ರ‍್ಯಾಂಡ್ ಪೇರೆಂಟ್ಸ್ ಡೇ “, ವ್ಯವಹಾರ ಜ್ಞಾನ ವೃದ್ಧಿಗಾಗಿ” ಬೆಂಕಿ ರಹಿತ ಅಡುಗೆ ತಯಾರಿ ಮತ್ತು ಮಾರಾಟ “, ಗಣಿತ ದಲ್ಲಿ ಪರಿಣಿತರಾಗಲು “ಅಬಾಕಸ್ ಪರೀಕ್ಷೆ ” ಗಳನ್ನು ನಡೆಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಚಾಲಕ ಸಂತೋಷ್ ಶೆಟ್ಟಿ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಂತಹ ನೂತನ ಶೈಕ್ಷಣಿಕ ಯೋಜನೆಗಳನ್ನು ವೇದಿಕೆಯ ಮುಂದೆ ಪ್ರಸ್ತಾಪಿಸಿದರು. ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ರೇಷ್ಮಾ ಅಡಪ ಅವರು ಮುಂಬರುವ ದಿನಗಳಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಕಿಂಡರ್ ಗಾರ್ಡ್ ನಲ್ಲಿ ಓದುತ್ತಿರುವ ಪುಟಾಣಿಗಳ ಅಜ್ಜ ಅಜ್ಜಿಯಂದಿರರು ತಮ್ಮ ಮೊಮ್ಮಕ್ಕಳೊಡನೆ ಆಟದಲ್ಲಿ ಪಾಲ್ಗೊಂಡು ಬಹುಮಾನ ವಿಜೇತರಾದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತಾಯಂದಿರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಳು ಬೆಂಕಿ ರಹಿತ ತರಾವರಿ ಖಾದ್ಯಗಳನ್ನು ಸ್ವತಃ ತಯಾರಿಸಿ ನಾಲ್ಕು ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟುಗಳನ್ನು ನಡೆಸಿದರು.
ಪಾನಿಪುರಿ, ಬಗೆಬಗೆಯ ತಂಪು ಪಾನಿಯಗಳು, ವಿವಿಧ ಸ್ವೀಟ್ಸ್,ಸ್ಯಾಂಡ್ವಿಚ್, ಮಂಡಕ್ಕಿ ಉಪ್ಕರಿ, ಕುಕುಂಬರ್ ಬೋಟ್ ಹೀಗೆ ತರಹೇವಾರಿ ಐವತ್ತಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ವೃತ್ತಿಪರ ವ್ಯಾಪಾರಿಗಳಂತೆ ಮಾರಾಟ ಮಾಡಿದರು.

ಪಾಲಕರ ಪ್ರತಿನಿಧಿಯಾಗಿ ರಾಜೇಶ್, ಶೇಖರ್ ಪೂಜಾರಿ,ನೇಹಾ ಬೇಗಂ ಹಾಗೂ ಪ್ರೇಮಾ ಪೂಜಾರಿ , ಶೈಕ್ಷಣಿಕ ನಿರ್ದೇಶಕ ಪ್ರಕಾಶ್ ಶೆಟ್ಟಿ, ಸಹ ಆಡಳಿತ ಅಧಿಕಾರಿ ಆಶಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಮಮತಾ ಪೂಜಾರಿಯವರು ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಗಗನ ಮತ್ತು ಅಂಜಲಿ ನಿರೂಪಿಸಿದರು. ವನಿತಾ ವಂದಿಸಿದರು.