ಬೆಳಗಾವಿ : ಮಹಾವಿದ್ಯಾಲಯದ ಉಚಿತ ಸೇವಾ ಘಟಕದಲ್ಲಿ ತೊಡಗಿಸಿಕೊಂಡು ವೃತ್ತಿಪರ ಕೌಶಲಗಳನ್ನು ಮೈಗೂಡಿಸಿಕೊಳ್ಳಿ ಎಂದು ಜಾರ್ಖಂಡ್ ರಾಜ್ಯದ ರಾಂಚಿ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ  ಡಾ.ಅಶೋಕ ಪಾಟೀಲ ಸಲಹೆ ನೀಡಿದರು. ಸೋಮವಾರ ನಗರದ ಕೆಎಲ್ ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ  ವತಿಯಿಂದ ಏರ್ಪಡಿಸಲಾಗಿದ್ದ ಕಾನೂನು ಕಾಲೇಜುಗಳಲ್ಲಿ ಕಾನೂನು ನೆರವು-ವಿದ್ಯಾರ್ಥಿಗಳ ಪಾತ್ರ ವಿಷಯವಾಗಿ ಮಾತನಾಡಿದರು.
ಕಾನೂನು ಮಹಾವಿದ್ಯಾಲಯಗಳಲ್ಲಿನ ಉಚಿತ ಕಾನೂನು ಸೇವಾ ಘಟಕದಲ್ಲಿ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವದ್ದು. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಅವಧಿಯಿಂದಲೇ ಸಾಮಾಜಿಕ ಸೇವೆ ಮಾಡಬೇಕು. ಇದರಿಂದ ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳನ್ನು ಅರಿತು ಸಮಾಜಕ್ಕೆ ಹಾಗೂ ನೊಂದ ದುರ್ಬಲ ಜನರಿಗೆ ನ್ಯಾಯ ಒದಗಿಸುವಲ್ಲಿ ಸಹಕಾರಿಯಾಗಬೇಕು. ಉಚಿತ ಕಾನೂನು ಸೇವಾ ಘಟಕದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲಗಳು ಮೈಗೂಡಿಸಿ ಕೊಳ್ಳಬಹುದು. ವಿದ್ಯಾರ್ಥಿಗಳು ಧೈರ್ಯ, ಕಠಿಣ ಪರಿಶ್ರಮ, ಸಹನೆ, ಸಾಹಸ ಮುಂತಾದ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಬಿ.ಜಯಸಿಂಹ ಮಾತನಾಡಿ, ಕಾಲೇಜು ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ತಿಳಿಸಿದರು.

ಆರ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅನಿಲ್ ಹವಾಲ್ದಾರ, ಬೆಂಗಳೂರು ಕೆಎಲ್ ಇ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ
ಡಾ. ಸುಭಾಷ ಗೌಡಪ್ಪನವರ ಉಪಸ್ಥಿತರಿದ್ದರು. ಬಿಎಎಲ್ಎಲ್‌ಬಿ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಯಿರಾಜ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ
ಎಂ.ಎಸ್.ಅಲ್ಲಪ್ಪನವರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ ಪಾಲಕೊಂಡ ವಂದಿಸಿದರು.