ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದವ ಮತ್ತು ಅದಕ್ಕೆ ಪ್ರಚೋದನೆ ನೀಡಿರುವ ಆರು ಜನರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಗುರುವಾರದಂದು ಮಹತ್ವದ ತೀರ್ಪು ನೀಡಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ನಸ್ಲಾಪುರದ ಸಚಿನ್ ಬಾಬಾ ಸಾಹೇಬ್ ರಾಯಮಾನೆ, ರೂಪಾ ಬಾಬಾ ಸಾಹೇಬ್ ರಾಯಮಾನೆ, ರಾಕೇಶ್ ಬಾಬಾ ಸಾಹೇಬ್ ರಾಯಮಾನೆ, ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ರೋಹಿಣಿ ಶ್ರೀಮಂತ ದೀಕ್ಷಿತ್, ಸಾಂಗ್ಲಿ ಜಿಲ್ಲೆ ಮೀರಜ್ ತಾಲೂಕಿನ ಕುಪವಾಡದ ವಿನೋದ ಸುರೇಶ ರಾಯಮಾನೆ, ವಿಜಯ್ ತಾನಾಜಿ ಸಾಳುಂಕೆ ಅವರೇ ಈ ಕಠಿಣ ಶಿಕ್ಷೆಗೆ ಗುರಿಯಾದವರು.

2015 ರ ಜೂನ್ 21ರಂದು ಇಡೀ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಚಿನ್ ಬಾಬಾಸಾಹೇಬ್ ರಾಯಮಾನೆ ಕೊಲ್ಲಾಪುರ ಜಿಲ್ಲೆಯ ಗಗನಬಾವಡಾ ಎಂಬ ಗ್ರಾಮೀಣ ಪ್ರದೇಶಕ್ಕೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿ ಶೆಡ್ ವೊಂದರಲ್ಲಿ ಅತ್ಯಾಚಾರ ಎಸಗಿದ್ದ. ಉಳಿದವರು ಅವನಿಗೆ ಪ್ರಚೋದನೆ ನೀಡಿದ್ದರು. ಮಾತ್ರವಲ್ಲ ಆ ಶೆಡ್ಡಿನಿಂದ ಅಪ್ರಾಪ್ತೆ ಹೊರಬಾರದಂತೆ ತಡೆಯೊಡ್ಡಿದ್ದರು. ಜತೆಗೆ ಸುಮಾರು ಮೂರು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಅಪ್ರಾಪ್ತೆಯನ್ನು ಒಪ್ಪಿಸುವುದಾಗಿ ಇವರು ಬಾಲಕಿಯ ತಂದೆಗೆ ಧಮ್ಕಿ ಹಾಕಿದ್ದರು.

ಕೊನೆಗೂ ಬಾಲಕಿಯ ತಂದೆ ನೀಡಿದ್ದ ದೂರಿನಂತೆ ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್. ನಾಯ್ಕರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇಡೀ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಆರೋಪಿಗಳಿಗೆ ಶಿಕ್ಷೆ ನೀಡಿ ಈ ಮಹತ್ವದ ತೀರ್ಪು ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯುವಂತೆಯೂ ಅಪ್ರಾಪ್ತೆಯ ತಂದೆಗೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ.ಪಾಟೀಲ ಅವರು ವಾದ ಮಂಡಿಸಿದ್ದರು.