ಹೆಬ್ರಿ : ಹೆಬ್ರಿಯ ನಾಡ್ತಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳೆಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಮೂಲದ ಶಿನು ಡ್ಯಾನಿಯಲ್(40) ಮತ್ತು ದೀಪಕ್ ಎಂ.ವಿ. ಮೃತ ಯುವಕರು. ಶಿವಮೊಗ್ಗ ಜಿಲ್ಲೆಯ ವಿನ್ಸೆಂಟ್ ಎಂ.ಸಿ., ಮೋಹನ್ (34), ಶಿನು ಡ್ಯಾನಿಯಲ್(40) ಮತ್ತು ದೀಪಕ್ ಎಂ.ವಿ. ಎಂಬವರು ಭಾನುವಾರ ಸಂಜೆ ಸ್ನಾನ ಮಾಡಲು ಸೀತಾನದಿ ಹೊಳೆಗೆ ತೆರಳಿದ್ದರು. ಶಿನು ಡ್ಯಾನಿಯಲ್ ಹೊಳೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಶಿನು ಮುಳುಗುತ್ತಿದ್ದಾರೆಂದು ದೀಪಕ್, ರಕ್ಷಿಸಲು ನೀರಿಗೆ ಹಾರಿದ್ದಾರೆ.

ಆದರೆ ನೀರಿನ ಸುಳಿಯಲ್ಲಿ ಹೊರಗೆ ಬರಲಾಗದೆ ಶಿನು ಡ್ಯಾನಿಯಲ್ ಹಾಗೂ ದೀಪಕ್ ನೀರಿನಲ್ಲಿ ಮುಳುಗಿದ್ದಾರೆ. ಈ ಕುರಿತು ವಿನ್ಸೆಂಟ್ ಎಂ.ಸಿ. ನೀಡಿದ ಮಾಹಿತಿಯಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.