ಬೆಂಗಳೂರು: ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಕರು ವಿಭಿನ್ನ ರೀತಿಯ ಸಿದ್ಧತೆ ಮಾಡಿದ್ದಾರೆ. ಕೆಲವು ಶಾಲೆಗಳಿಗೆ ಬಣ್ಣದ ಅಲಂಕಾರ ಮಾಡಲಾಗಿದ್ದರೆ, ಇನ್ನೂ ಕೆಲವೆಡೆ ಬಣ್ಣ ಬಣ್ಣದ ಬಲೂನುಗಳನ್ನು ತೂಗುಹಾಕಿ ಸಜ್ಜುಗೊಳಿಸಲಾಗಿದೆ. ಶಾಲೆ ಆರಂಭವಾಗುತ್ತಿದ್ದಂತೆ ತರಗತಿಗಳಲ್ಲಿ ಇದೀಗ ಮಕ್ಕಳ ಕಲರವ ಶುರುವಾಗಿದೆ.

ಸುದೀರ್ಘ ಬೇಸಿಗೆ ರಜೆ ಕಳೆದು ಮಕ್ಕಳೆಲ್ಲ ಮರಳಿ ಶಾಲೆಯತ್ತ ಹೆಜ್ಜೆ ಹಾಕುವ ದಿನ ಬಂದೇ ಬಿಟ್ಟಿದೆ. ಮೇ 31ಕ್ಕೆ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಎಲ್ಲ ಮಕ್ಕಳು ತಯಾರಾಗಿ ನಿಂತಿದ್ದರೆ, ಶಾಲಾ ಶಿಕ್ಷಕರು ಶಾಲೆಗಳಲ್ಲಿ ಸರ್ವ ವ್ಯವಸ್ಥೆಗಳನ್ನು ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಶಾಲಾರಂಭಕ್ಕೆ ಮಳೆಯೂ ಸಾಥ್ ನೀಡುವ ನಿರೀಕ್ಷೆಯಿದೆ.

ಮೇ 29ರಂದು ಶಿಕ್ಷಕರಿಗೆ ಶಾಲೆಗೆ ಬರಲು ಇಲಾಖೆ ಸೂಚನೆ ನೀಡಲಾಗಿತ್ತು. ಶಾಲೆಗಳನ್ನು ಸ್ವಚ್ಛಗೊಳಿಸಿ, ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮಕ್ಕಳು ಚೀಲ, ಕೊಡೆ, ಬುತ್ತಿ ಹೊತ್ತು ಶಾಲೆಯತ್ತ ಹೆಜ್ಜೆ ಇಡುವ ದೃಶ್ಯ ಶುಕ್ರವಾರದಿಂದ ಎಲ್ಲೆಡೆ ಗಮನಸೆಳೆಯಿತು.