ಇಂತಹ ಅಪಸ್ವರಗಳು ಯಾರಿಗೂ
ಶೋಭೆ ತರಲಾರವು

ಪುರಿ ಜಗದ್ಗುರುಗಳೂ ಸೇರಿದಂತೆ ಕೆಲವರು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ/ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳಿಗೆ ಹೋಗದಿರಲು ನಿರ್ಧರಿಸಿದ್ದಾರೆ. ಅದು ಅವರ ಇಷ್ಟ. ಆದರೆ ಅದಕ್ಕೆ ಅವರು ನೀಡಿರುವ ಕಾರಣಗಳು ಸಮರ್ಥನೀಯವಲ್ಲ. ಹಿಂದೂ ಸನಾತನ ಧರ್ಮದಲ್ಲಿ ಅಂತಹ ಸಂಕುಚಿತ ಭಾವನೆಗಳಿಗೆ ಎಡೆ ಇಲ್ಲ, ಇರಬಾರದು‌ಕೂಡ. ಈ
ಜಗದ್ಗುರುಗಳಾದವರು ಒಂದು ಮಾತನ್ನು ತಿಳಿದುಕೊಳ್ಳಬೇಕು. ಅವರಿಗಿಂತ ಹಿಂದೂ ಧರ್ಮ ದೊಡ್ಡದು. ಅವರ ಜಗದ್ಗುರು ಪೀಠಕ್ಕಾಗಲಿ, ಅವರಿಗಾಗಲಿ ಮಹತ್ವವಿರುವುದು ಅವರು ಹಿಂದೂ ಧರ್ಮದಲ್ಲಿದ್ದಾರೆನ್ನುವುದಕ್ಕಾಗಿ. ಅದು ಅವರ ವೈಯಕ್ತಿಕ ಪೀಠವಲ್ಲ. ಅದು ಹಿಂದೂ ಧರ್ಮದ ಪೀಠ. ಹಿಂದೂ ಸನಾತನ ಧರ್ಮಕ್ಕೆ ಗೌರವವಿರುವುದು ಅದರ ಮೂಲತತ್ವ ಗಳಾದ ಲೋಕಾ: ಸಮಸ್ತಾ ಸುಖಿನೋ ಭವಂತು/ ಸರ್ವೇ ಜನಾ: ಸುಖಿನೋ ಭವಂತು ಎನ್ನುವುದಕ್ಕಾಗಿ. ಅಲ್ಲಿ ಸಂಕುಚಿತ ಜಾತಿಧರ್ಮಗಳ ಭಾವನೆಗೆ ಸ್ಥಾನವಿಲ್ಲ. ಇರಬಾರದು.

ರಾಮ ಮಂದಿರ ಇಂದು ರೂಪುಗೊಳ್ಳಲು ಕಾರಣರಾದವರು ನರೇಂದ್ರ ಮೋದಿಯವರು. ಅವರು ಈ ದೇಶದ ೧೫೦ ಕೋಟಿ ಜನರ ಪ್ರತಿನಿಧಿ. ಅವರು ಮುಟ್ಟಿದಾಕ್ಷಣ ರಾಮ ಅಪವಿತ್ರನಾಗುವುದಿಲ್ಲ. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ದೇಶವಿದೇಶಗಳ ಕೋಟಿ ಕೋಟಿ ಜನ ಇಂದು ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಬಗೆಬಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ಅಪಸ್ವರವೆತ್ತುವುದು, ಅಬದ್ಧ ನುಡಿಗಳನ್ನಾಡುವುದು ಯಾರಿಗೂ ಶೋಭಿಸುವಂತಹದಲ್ಲ. ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷದವರಿಗೆ ಅವರದೇ ಆದ ಅದೊಂದು ರಾಜಕೀಯ ಉದ್ದೇಶವಿರಬಹುದು. ಆದರೆ ಹಿಂದೂ ಧರ್ಮಪೀಠದ ಮೇಲೆ ಕುಳಿತಿರುವವರು ಅಂತಹ ಮನಸ್ಥಿತಿ ಹೊಂದಿರಬಾರದು. ಮೊದಲೇ ಹಿಂದೂ ಧರ್ಮ ಅಪಾಯದ ಅಂಚಿನಲ್ಲಿದೆ. ಇಂತಹ ಸಮಯದಲ್ಲಿ ನಮ್ಮ ಒಗ್ಗಟ್ಟನ್ನು ನಾವು ಕಾದುಕೊಳ್ಳಬೇಕು ಮತ್ತು ಅದಕ್ಕೆ ಮಠ ಪೀಠಾಧೀಶರ ಬೆಂಬಲ ಅಗತ್ಯ. ಯಾರೇ ಇರಲಿ, ಈ ಕೆಲವು ಜಗದ್ಗುರುಗಳ ನಿಲುವನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ. ಅವರಿಗಿಂತ ನಮಗೆ ಹಿಂದೂ ಧರ್ಮ ದೊಡ್ಡದು. ಹಿಂದೂ ಧರ್ಮ ಉಳಿದರೆ ಅವರ ಪೀಠ ಉಳಿಯುತ್ತದೆನ್ನುವುದನ್ನು ಅವರು ನೆನಪಿಡುವುದು ಉತ್ತಮ. ಇಡೀ ರಾಷ್ಟ್ರ ಇಂದು ಒಂದಾಗಿ ರಾಮ ಮಂದಿರದ ನಿರ್ಮಾಣ ಮತ್ತು ರಾಮ ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂದರ್ಭ.