ಚಿಕ್ಕಮಗಳೂರು: ಕಾಫಿ ನಾಡಲ್ಲಿ ಮಗು ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

ಕೊಬ್ಬರಿ ಎಣ್ಣೆ ಗಾಣಕ್ಕೆ ತಂದೆಯೊಂದಿಗೆ ತೆರಳಿದ್ದ ಪುತ್ರಿ ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಕೊನೆಗೂ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ.

ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದ ತಾವರಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ದಂಪತಿ ಶುಕ್ರವಾರ ತರೀಕೆರೆ ಪೊಲೀಸರಿಗೆ ಮಗುವನ್ನು ತಂದು ಒಪ್ಪಿಸಿದ್ದಾರೆ. ಕಡೂರು ತಾಲೂಕು ಯಗಟಿ ಬಳಿಯ ಸೀತಾಪುರ ಹಟ್ಟಿ ತಾಂಡ್ಯದ ರಘು ನಾಯಕ್ ಮತ್ತು ಪುತ್ರಿ ಮಾನಸ ಗುರುವಾರದಂದು ಕಡೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿಯ ಕೊಬ್ಬರಿ ಎಣ್ಣೆ ಗಾಣದ ಬಳಿ ಬಂದಿದ್ದ ವೇಳೆ ಪುತ್ರಿ ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದ ರಘು ನಾಯಕ್, ಮಹಿಳೆ ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ನೋಡಿದ್ದರು.

ರಘು ನಾಯಕ್ ಕೊಬ್ಬರಿ ಎಣ್ಣೆ ಗಾಣಕ್ಕೆ ಪುತ್ರಿ ಮಾನಸಳೊಂದಿಗೆ ಬಂದಿದ್ದರು. ಮಾನಸಳನ್ನು ಬೈಕ್ ಬಳಿ ಬಿಟ್ಟು ಎಣ್ಣೆಗಾಣದಲ್ಲಿ ಕೊಬ್ಬರಿ ಇಡಲು ಹೋಗಿದ್ದರು. ಆದರೆ, ನಂತರ ಮಗುವನ್ನು ಕರೆತಂದಿರುವುದನ್ನೇ ಮರೆತು ಅಲ್ಲಿಂದ ನೇರವಾಗಿ ಮದ್ಯಪಾನ ಮಾಡಲು ಹೋಗಿದ್ದರು. ಮಗು ಅಳುತಿರುವುದನ್ನು ನೋಡಿದ ತರೀಕೆರೆ ತಾಲೂಕಿನ ಶಿವಪುರ ಬಳಿಯ ಚಟ್ನಹಳ್ಳಿ ಗ್ರಾಮದ ಓಂಕಾರಪ್ಪ ಹಾಗೂ ದಂಪತಿ ಮಗುವನ್ನು ಸಂತೈಸಿ ಪೋಷಕರು ಬರಬಹುದು ಎಂದು ಅರ್ಧ ಗಂಟೆ ಕಾಲ ಕಾದಿದ್ದಾರೆ. ಕೊನೆಗೆ ಯಾರು ಬಾರದೆ ಇರುವ ಕಾರಣ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಗು ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ. ಕೊನೆಗೂ ತಾವರೆಕೆರೆ ಗ್ರಾಮದ ಪ್ರಕಾಶ್ ಮತ್ತು ಮೇರಿ ಮಗುವನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು ಪ್ರಕರಣಕ್ಕೆ ಸುಖಾಂತ್ಯ ಸಿಕ್ಕಿದೆ.