ಬೆಂಗಳೂರು: ರಾಜ್ಯದ ಪ್ರಮುಖ 14 ದೇವಾಲಯಗಳಿಂದ ಇದೇ ಮೊದಲ ಬಾರಿಗೆ ಭಕ್ತಾದಿಗಳ ಮನೆ ಮನೆಗೆ ಪ್ರಸಾದ ತಲುಪಿಸುವ ‘ಇ-ಪ್ರಸಾದ’ ಸೇವೆಗೆ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಚಾಲನೆ ನೀಡಿದರು.ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ‘ಎ’ ಮತ್ತು ‘ಬಿ’ ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪ್ರಸಾದ ಪಡೆಯಲು ಇಲಾಖೆ ಅನುಕೂಲ ಕಲ್ಪಿಸಿದೆ.ಈ ಯೋಜನೆಯನ್ನು ‘ಸಿಎಸ್‌ಸಿ ಇ ಗವರ್ನೆನ್ಸ್‌ ಸರ್ವೀಸ್‌ ಇಂಡಿಯಾ ಲಿಮಿಟೆಡ್‌’ ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿ, ಪ್ರಾಯೋಗಿಕವಾಗಿ 14 ದೇವಾಲಯಗಳನ್ನು ಆಯ್ಕೆ ಮಾಡಿ ಜಾರಿ ಮಾಡಲಾಗಿದೆ. ಈಗಾಗಲೇ ಸಿಎಸ್‌ಸಿ ಸಂಸ್ಥೆ 241 ಪ್ರಸಾದ ಪ್ಯಾಕೆಟ್‌ಗಳನ್ನು ಭಕ್ತಾದಿಗಳಿಗೆ ತಲುಪಿಸಿದೆ. ನಗರ, ಗ್ರಾಮೀಣ ಹಾಗೂ ಹೊರ ರಾಜ್ಯದ ಭಕ್ತಾದಿಗಳು ತಮಗೆ ಬೇಕಾದ ದೇವಾಲಯವನ್ನು ಆಯ್ಕೆ ಮಾಡಿ ಪ್ರಸಾದಕ್ಕೆ ಹಣ ಪಾವತಿಸಿದರೆ 3-4 ದಿನಗಳಲ್ಲಿ ಭಕ್ತರ ಮನೆ ತಲುಪಲಿದೆ. ನಿಮ್ಮ ಮನೆಗೆ ಬರಲಿದೆಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, “ಇದೇ ಮೊದಲ ಬಾರಿಗೆ ಭಕ್ತಾದಿಗಳ ಮನೆ-ಮನೆಗೆ ಆನ್‌ಲೈನ್‌ ಮೂಲಕ ಪ್ರಸಾದ ತಲುಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಕರ್ನಾಟಕದ ಮಾದರಿ ಕಾರ್ಯಕ್ರಮ. ರಾಜ್ಯದ ಯಾವುದೇ ಭಾಗದ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್‌ ಮಾಡಿದರೆ, ಸಿಎಸ್‌ಸಿ ಇ ಗವರ್ನೆನ್ಸ್‌ ಸಂಸ್ಥೆಯು ಮನೆ ಬಾಗಿಲಿಗೆ ತಲುಪಿಸಲಿದೆ,” ಎಂದರು.”ರಾಜ್ಯದಲ್ಲಿ 390 ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಯಗಳಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ನಾನಾ ಕಾರಣಗಳಿಂದಾಗಿ ಎಲ್ಲರೂ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷಚೇತನರು, ಒಬ್ಬಂಟಿಗರು ದೇವಾಲಯಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಭಕ್ತರ ಅನುಕೂಲಕ್ಕಾಗಿ ‘ಇ-ಪ್ರಸಾದ’ ಸೇವೆ ಆರಂಭಿಸಲಾಗಿದೆ. ಇದನ್ನು ಭಕ್ತಾದಿಗಳು ಸದುಪಯೋಗಪಡಿಸಿಕೊಳ್ಳಬೇಕು. ಮತ್ತಷ್ಟು ದೇವಾಲಯಗಳನ್ನು ಸೇರಿಸಲು ಭಕ್ತಾದಿಗಳ ಸಲಹೆ ಸ್ವೀಕರಿಸಲಾಗುವುದು. ಆ ಮೂಲಕ ಬೇಡಿಕೆಯನ್ನಾಧರಿಸಿ ಸೇವೆ ವಿಸ್ತರಿಸಲಾಗುವುದು,” ಎಂದು ಭರವಸೆ ನೀಡಿದರು.ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಎಂ.ವಿ. ವೆಂಕಟೇಶ್‌, ರಾಧಾಕೃಷ್ಣ ರಾಜು, ಶಕೀಬ್‌ ಅಹ್ಮದ್‌, ಮಲ್ಲಿಕಾ, ಚಂದ್ರಶೇಖರ್‌ ಉಪಸ್ಥಿತರಿದ್ದರು.

ಏನೆಲ್ಲ ಪ್ರಸಾದ?
ಪರಂಪರಾಗತವಾಗಿ ಆಯಾ ದೇವಾಲಯಗಳಲ್ಲಿ ಒದಗಿಸುತ್ತಿರುವ ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ ಅಥವಾ ಭಂಡಾರ, ಕುಂಕುಮ, ಬಿಲ್ವಪತ್ರೆ/ಹೂವು/ತುಳಸಿ ಹಾಗೂ ಪ್ಯಾಕೆಟ್‌ ಅಳತೆಯ ಲ್ಯಾಮಿನೇಟೆಡ್‌ ಭಾವಚಿತ್ರ ಮತ್ತು ದಾರ ಸಂಬಂಧಿಸಿದ ದೇವಾಲಯದ ಮಹಿಮೆ ಹಾಗೂ ಸ್ತೋತ್ರವನ್ನು ಪಡೆಯಬಹುದು. ಅಂಚೆ ವೆಚ್ಚ ಸೇರಿದಂತೆ ಪ್ರಸಾದಕ್ಕೆ 100 ರೂ.ಗಳಿಂದ 200 ರೂ. ದರ ನಿಗದಿ ಮಾಡಲಾಗಿದೆ. ಭಕ್ತಾದಿಗಳು https://itms.kar.nic.in/hrcehome/index.php ವೆಬ್‌ಸೈಟ್‌ ಅಥವಾ ಸಮೀಪದ ಸಿಎಸ್‌ಸಿ ಕೇಂದ್ರದಿಂದ ಆನ್‌ಲೈನ್‌ ಮೂಲಕ ಪ್ರಸಾದವನ್ನು ಆರ್ಡರ್‌ ಮಾಡಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಯಾವೆಲ್ಲ ದೇವಸ್ಥಾನಗಳಿಂದ ಪ್ರಸಾದ ಮನೆಗೆ ಬರಲಿದೆ.

14 ದೇವಾಲಯಗಳ ವಿವರ

ವಿನಾಯಕ ಸ್ವಾಮಿ ಜಯನಗರ ಬೆಂಗಳೂರು, ಚೆಲುವನಾರಾಯಣಸ್ವಾಮಿ ದೇವಾಲಯ ಮಂಡ್ಯ ಜಿಲ್ಲೆ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ನಂಜನಗೂಡು ಮೈಸೂರು, ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು ಕೋಲಾರ ಜಿಲ್ಲೆ, ಸೋಮೇಶ್ವರ ಸ್ವಾಮಿ ದೇವಾಲಯ ಹಲಸೂರು ಬೆಂಗಳೂರು, ಮೂಕಾಂಬಿಕಾ ಕೊಲ್ಲೂರು ಉಡುಪಿ ಜಿಲ್ಲೆ, ಗವಿಗಂಗಾಧರೇಶ್ವರ ಸ್ವಾಮಿ ಗವೀಪುರ ಬೆಂಗಳೂರು, ಝರಾಣಿ ನರಸಿಂಹ ದೇವಸ್ಥಾನ ಬೀದರ್, ಬೆಳಗಾವಿ ಜಿಲ್ಲೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯ ದಕ್ಷಿಣ ಕನ್ನಡ, ಕನಕದುರ್ಗಮ್ಮ ದೇವಾಲಯ ಬಳ್ಳಾರಿ, ಮೈಲಾರಲಿಂಗೇಶ್ವರ ದೇವಸ್ಥಾನ ಹೂವಿನಹಡಗಲಿ ವಿಜಯನಗರ ಜಿಲ್ಲೆ, ಹುಲಿಗಮ್ಮ ದೇವಾಲಯ ಹುಲಿಗಿ ಕೊಪ್ಪಳ ಜಿಲ್ಲೆ, ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಗಾಣಗಾಪುರ ಕಲುಬರಗಿ ಜಿಲ್ಲೆ.