
ಪುತ್ತೂರು ಮಹಾಲಿಂಗೇಶ್ವರ
ಪುತ್ತೂರು ಮಹಾಲಿಂಗೇಶ್ವರ
ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ (ಏ.10) ವರ್ಷಾವಧಿ ಜಾತ್ರೆ ಆರಂಭಗೊಳ್ಳಲಿದೆ. ಶಾಸಕ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಉತ್ಸವಾದಿಗಳು ಸಮಯಕ್ಕೆ ಸರಿಯಾಗಿ ನಡೆಯುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತಿಳಿಸಿದ್ದಾರೆ.
ಏ.10ರಂದು ಬೆಳಿಗ್ಗೆ ಧ್ವಜಾರೋಹಣ, ರಾತ್ರಿ ಅಂಕುರಾರ್ಪಣೆ ಬಲಿ ಹೊರಟು ಉತ್ಸವ, ನಂತರ ದೇವರ ಬೊಳುವಾರು ಶ್ರೀರಾಮಪೇಟೆ ಕಾರ್ಜಾಲು, ರಕೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಪೇಟೆ ಸವಾರಿ ನಡೆಯುವುದು. ಪೇಟೆ ಸವಾರಿಯುದ್ದಕ್ಕೂ ಪ್ರತಿ ಕಟ್ಟೆಯಲ್ಲೂ ದೇವರ ಪೂಜೆ ನಡೆಯಲಿದೆ. ಏ.11 ರಂದು ರಾತ್ರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ, ಏ.12ರಂದು ರಾತ್ರಿ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ. ಏ.13ರಂದು ಮೇಷ ಸಂಕ್ರಮಣ ಉತ್ಸವ, ರಾತ್ರಿ ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರು ಬೈಲು ಸವಾರಿ, ಏ.14ರಂದು ಸೌರಮಾನ ಯುಗಾದಿ (ವಿಷು) ಉತ್ಸವ, ವಸಂತಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೇಲ್, ಸಕ್ಕೆರೆಕಟ್ಟೆ ಸವಾರಿ, ಏ.15ರಂದು ರಾತ್ರಿ ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ, ಏ.16ರಂದು ಬೆಳಿಗ್ಗೆ ತುಲಾಭಾರ ಸೇವೆ, ರಾತ್ರಿ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಕಿರುವಾಳು ಬರುವುದು, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಏ.17ರಂದು ಬೆಳಿಗ್ಗೆ ಉತ್ಸವ ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಗಂಟೆ 7.30ರಿಂದ ಉತ್ಸವ, `ಪುತ್ತೂರು ಬೆಡಿ’ ಸುಡುಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ದೇವರ ಬಂಗಾರ್ ಕಾಯರ್ಕಟ್ಟೆ ಸವಾರಿ, ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಭೂತಬಲಿ, ಶಯನ ಕಾರ್ಯಕ್ರಮಗಳು ನಡೆಯಲಿವೆ. ಎ.18ರಂದು ಬೆಳಿಗ್ಗೆ ಗಂಟೆ 7.30ಕ್ಕೆ ಬಾಗಿಲು ತೆರೆಯುವ ಮುಹೂರ್ತ, ತುಲಾಭಾರ ಸೇವೆ, ಮಧ್ಯಾಹ್ನ 3.30ರಿಂದ ವೀರಮಂಗಲಕ್ಕೆ ದೇವರ ಅವಭೃತ ಸ್ನಾನ ಸವಾರಿ ನಡೆಯಲಿದೆ. ಎ.19ರಂದು ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ, ಹುಲಿ ಭೂತ, ರಕೇಶ್ವರಿ ನೇಮ ನಡೆಯಲಿದೆ. ಎ.20ರಂದು ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ, ಪರಿವಾರ ದೈವಗಳ ದೈವಗಳ ನೇಮ ನಡೆಯಲಿದೆ ಎಂದು ಅವರು ಹೇಳಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಅವರು ದೇವಳದ ಒಳಾಂಗಣದ ಅರ್ಚಕ ವ್ಯವಸ್ಥೆಯಲ್ಲಿ, ಉಳಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ಕೃಷ್ಣವೇಣಿ, ನಳಿನಿ ಪಿ.ಶೆಟ್ಟಿ, ದಿನೇಶ್ ಕುಲಾಲ್, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ ಅವರ ಸಮನ್ವಯದಲ್ಲಿ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವುದು ಎಂದು ಅವರು ಹೇಳಿದರು.
ಈ ಬಾರಿ ಶಿವಪೂಜೆ ವಿಶೇಷ
ಪ್ರತಿ ದಿನ ದೇವರ ಉತ್ಸವ ಬಲಿ ಪೇಟೆ ಸವಾರಿ ಕಟ್ಟೆ ಪೂಜೆ ಸ್ವೀಕಾರ ನಡೆಯಲಿದೆ. ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಅನ್ನಪ್ರಸಾದ ವಿತರಣೆಯು ದೇವಳದ ಕೆರೆಯ ಬಳಿ ನಡೆಯಲಿದ್ದು ವಿಶೇಷವಾಗಿ ಶಿವಪೂಜೆ ಸೇವೆ ಇರಲಿದೆ. ಎ.17ರಂದು ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಉಳಿದೆಲ್ಲಾ ದಿನಗಳಲ್ಲಿ ಸಂಜೆ 5ಗಂಟೆಯಿಂದ ರಾತ್ರಿ 10ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು