ಬೆಳಗಾವಿ : ಗೋಕಾಕ ನಗರದ ಹೊರವಲಯದಲ್ಲಿರುವ ಜತ್ತ- ಜಾಂಬೋಟಿ ಅಂತಾರಾಜ್ಯ ಹೆದ್ದಾರಿಯ ಲೋಳಸೂರು ಸೇತುವೆ ಬಳಿ ಇದೀಗ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಘಟಪ್ರಭಾ ನದಿಯ ನೀರಿನ ಹರಿವು ಒಂದೇ ಸಮನೆ ಏರಿಕೆ ಮಗೊಂಡಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಗೋಕಾಕ ತಾಲೂಕು ಆಡಳಿತ ಈ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧ ಹೇರಿದೆ.

ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿಶೇಷವಾಗಿ ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪೂರ್ವ ಭಾಗದ ರಾಮದುರ್ಗವನ್ನು ಹೊರತುಪಡಿಸಿ ಶುಕ್ರವಾರವು
ಎಲ್ಲಾ ತಾಲೂಕುಗಳಲ್ಲಿ ಮಳೆ ಬಿದ್ದಿದೆ. ವ್ಯಾಪಕ ಮಳೆ ಕಾರಣದಿಂದಾಗಿ ಒಂದು ವಾರದಿಂದ ಸತತವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸುತ್ತಿದೆ.ಇದರಿಂದ ಜನ ಹೈರಾಣಾಗಿದ್ದಾರೆ.

ಆಯಾ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಗಳು ಮುಂಜಾಗ್ರತ ಕ್ರಮವಾಗಿ ಜನರಿಗೆ ಸೂಕ್ತ ಎಚ್ಚರಿಕೆ ರವಾನಿಸಿವೆ. ಸಹಾಯವಾಣಿ ಮೂಲಕ ಜನರಿಗೆ ಸ್ಪಂದಿಸಲು ಮುಂದಾಗಿವೆ.