ನವದೆಹಲಿ: ಪೊಲೀಸರು ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಥವಾ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಆರೋಪಿಗಳಿಗೆ ವಾಟ್ಸ್ಆ್ಯಪ್ ಮತ್ತು ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೋಟಿಸ್ ರವಾನಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ರಾಜೇಶ್ ಬಿಂದಲ್ ಅವರು ಇರುವ ವಿಭಾಗೀಯ ಪೀಠವು, ಕಾನೂನಿನ ಅಡಿಯಲ್ಲಿ ಅನುಮತಿ ನೀಡಲಾಗಿರುವ ವಿಧಾನದ ಮೂಲಕ ಮಾತ್ರವೇ ನೋಟಿಸ್‌ ರವಾನಿಸಬೇಕು ಎಂಬ ಸೂಚನೆಯನ್ನು ಪೊಲೀಸರಿಗೆ ರವಾನಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈಚೆಗೆ ನಿರ್ದೇಶನ ನೀಡಿದೆ.