Join The Telegram | Join The WhatsApp |
ಸುವರ್ಣಸೌಧ ೪೦೦-೫೦೦ ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಕಟ್ಟಿದ ಉದ್ದೇಶವೇನು ಎಂದು ನಮ್ಮ ಜನಪ್ರತಿನಿಧಿಗಳನ್ನೇ ಕೇಳಬೇಕಾಗಿದೆ. ಕಟ್ಟಿಸಿದವರೂ ಈ ವಿಷಯವಾಗಿ ಏನೂ ಮಾತಾಡುತ್ತಿಲ್ಲ, ಏನೂ ಮಾಡುತ್ತಿಲ್ಲ. ಇಂತಹ ಅಸಡ್ಡೆ , ನಿರ್ಲಕ್ಷ್ಯ ಏಕೆ? ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗಾಗಲಿ, ಜನರಿಗಾಗಲಿ ಯಾಕೆ ಈ ವಿಷಯದಲ್ಲಿ ಅನಾಸಕ್ತಿಯೋಗ? ಅರ್ಥವಾಗದ ವಿಷಯ. ಯಾವುಯಾವುದೋ ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಎತ್ತಿಕೊಂಡು” ಓರಾಟ” ನಡೆಸುವ ವರಿಗೆ ಇದು ಯಾಕೆ ವಿಷಯವಾಗಲಿಲ್ಲ? ತಿಳಿಯದು.
ಬೆಳಗಾವಿಯನ್ನು ಎರಡನೇ ( ಉಪ) ರಾಜಧಾನಿಯಾಗಿ ಮಾಡಿ , ಕನಿಷ್ಠ ಈ ಭಾಗದ ೧೦-೧೨ ಜಿಲ್ಲೆಗಳ ಆಡಳಿತದ ಅವಶ್ಯಕತೆಗಳು ಇಲ್ಲಿಯೇ ಈಡೇರುವಂತಾದರೆ ಆಗುವ ಪ್ರಯೋಜನದ ಬಗ್ಗೆ ಯೋಚಿಸಬಾರದೇಕೆ? ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗ ಜಿಲ್ಲೆಗಳಿಂದ ಪ್ರತಿನಿತ್ಯ ಕನಿಷ್ಠ ೫೦ ಸಾವಿರ ಜನ ತಮ್ಮ ಆಡಳಿತಾತ್ಮಕ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗುತ್ತಾರೆ. ಬೆಂಗಳೂರಿನಲ್ಲಿ ಇವರ ಕೆಲಸ ಆಗುವದು ಅಷ್ಟು ಸುಲಭವಲ್ಲ. ಸರಕಾರಿ ಕೆಲಸ ಮಾಡಿಕೊಡುವ ಏಜಂಟರುಗಳೆ ಇದ್ದಾರೆ. ಎರಡು ಮೂರು ದಿವಸ, ಕೆಲವೊಮ್ಮೆ ವಾರಗಟ್ಟಲೆ ಬೆಂಗಳೂರಿನಲ್ಲಿ ಉಳಿಯಬೇಕು. ಹತ್ತಿಪ್ಪತ್ತು ಸಾವಿರ ಖರ್ಚು ಮಾಡಬೇಕು. ( ಲಂಚದ ಹಣ ಬಿಟ್ಟು). ಬಸ್ಸಿನವರು, ಹೊಟೆಲಿನವರು, ಲಾಡ್ಜಿಂಗ್ ನವರು, ವಕೀಲರು, ಏಜೆಂಟರು ಅಧಿಕಾರಿ ನೌಕರರು ಎಲ್ಲರೂ ಇವರನ್ನು ಸುಲಿಗೆ ಮಾಡುತ್ತಾರೆ. ಒಂದೇ ಸಲಕ್ಕೆ ಕೆಲಸ ಆಗುತ್ತದೆನ್ನುವಂತಿಲ್ಲ.
ಎರಡನೆಯದಾಗಿ ಇದರಿಂದ ಬೆಂಗಳೂರಿನ ಜನದಟ್ಟಣೆ ಹೆಚ್ಚಾಗುತ್ತಿದೆಯಲ್ಲದೆ ರಾಜಧಾನಿಯ ಅಸ್ತವ್ಯಸ್ತ ಬೆಳವಣಿಗೆ ಮತ್ತು ಇತರ ಅವ್ಯವಸ್ಥೆಗಳಿಗೂ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ಇರುವ ಉತ್ತಮ ಉಪಾಯ ಬೆಳಗಾವಿಯ ಸುವರ್ಣ ಸೌಧವನ್ನು ಬಳಸಿ ಈ ಭಾಗದ ಆಡಳಿತ ಇಲ್ಲಿಯೇ ಜನರಿಗೆ ಎಟುಕುವಂತೆ ಮಾಡುವದು. ಇದರಿಂದ ಸಾವಿರಾರು ಜನರ ಹಣ, ಸಮಯ, ಶ್ರಮ ಉಳಿತಾಯವಾಗಲಿದೆ. ಇದನ್ನೇಕೆ ಜನಪ್ರತಿನಿಧಿಗಳಾಗಲಿ, ಸರಕಾರವಾಗಲಿ ಯೋಚಿಸುತ್ತಿಲ್ಲ? ಇಲ್ಲಿಯ ಜನರ ಸಮಸ್ಯೆಗಳು ಪರಿಹಾರವಾಗುವದು ಬೇಕಿಲ್ಲವೇ ಇವರಿಗೆ? ಬೆಂಗಳೂರಿನಲ್ಲಿರುವ ಅಧಿಕಾರಿಗಳಿಗೆ, ಅಲ್ಲಿನ ಜನರಿಗೆ ಇದು ಬೇಡವಾಗಿದೆ. ಏಕೆಂದರೆ ಅವರ ಉತ್ಪನ್ನದ ಬಹುಭಾಗ ಇಲ್ಲಿನವರಿಂದಲೇ ಸಿಗುವದು. ಅವರ ಲಾಬಿಗೆ ಸರಕಾರ ಮಣಿಯುತ್ತಿದೆಯೆನ್ನಬೇಕಾಗುತ್ತದೆ.
ಉತ್ತರ ಭಾಗದ ನೂರಕ್ಕೂ ಹೆಚ್ಚು ಶಾಸಕರು ಮತ್ತು ಹೋರಾಟಗಾರರು ಯಾಕೆ ಈ ಬಗ್ಗೆ ಯೋಚಿಸುತ್ತಿಲ್ಲ? ಏಕೆ ಯೋಚಿಸಬಾರದು? ವರ್ಷಕ್ಕೆ ಹತ್ತು ದಿನ ವ್ಯರ್ಥ ಕಲಾಪ ನಡೆಸಿಹೋಗುವಷ್ಟಕ್ಕೇ ನಮ್ಮ ಜನ ಯಾಕೆ ತೃಪ್ತರಾಗಿದ್ದಾರೆ ?
ಎಲ್. ಎಸ್. ಶಾಸ್ತ್ರಿ
Join The Telegram | Join The WhatsApp |