ಬೆಂಗಳೂರು: ಡೀಸೆಲ್‌ ದರ ಏರಿಕೆ ಹಾಗೂ ಟೋಲ್‌ ಶುಲ್ಕ ಹೆಚ್ಚಳ ವಿರೋಧಿಸಿ ಸೋಮವಾರ ( ಏ.14) ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಸಜ್ಜಾಗಿದೆ.

ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಬೆಂಬಲಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ. ಕೆಲ ಬಣದ ನಾಯಕರು ಸರ್ಕಾರದೊಟ್ಟಿಗೆ ಕೈಜೋಡಿಸಿದ್ದು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಹಲವು ಪೆಟ್ರೋಲ್‌ ಬಂಕ್‌ ಸಂಘಟನೆಗಳು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಮುಷ್ಕರ ನಡೆಸುವುದು ನಿಶ್ಚಿತ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ಹೇಳಿದ್ದಾರೆ.

ಪೆಟ್ರೋಲಿಯಂ ಅಸೋಸಿಯೇಷನ್, ಗ್ಯಾಸ್ ವಾಹನಗಳು ಹಾಗೂ ಆಸಿಡ್ ವಾಹನಗಳು, ಅಕ್ಕಿ ಹಾಗೂ ತರಕಾರಿ ಮಾರುವ ವಾಹನ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ಬಂದ್ ಇರಲಿದೆ ಎಂದು ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು ಮುಷ್ಕರಕ್ಕೆ ಬೆಂಬಲಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೊರರಾಜ್ಯಗಳಿಂದಲೂ ಲಾರಿಗಳು ಬರಲು ಬಿಡುವುದಿಲ್ಲ ವಾಣಿಜ್ಯ ಸೇರಿದಂತೆ ಎಲ್ಲ ಮಾದರಿಯ ಸರಕು ಸೇವೆಗಳು ಸ್ತಬ್ಧಗೊಳ್ಳಲಿವೆ ಎಂದರು.