ಚಿಕ್ಕೋಡಿ :
ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕ ಶಕ್ತಿ ವಲಯವಾಗಿ ಬೆಳೆದುನಿಂತಿದೆ. ಔದ್ಯಮಿಕವಾಗಿ, ಆರೋಗ್ಯ, ಶೈಕ್ಷಣಿಕವಾಗಿ ಡಿಜಿಟಲ್ ಭಾರತವು ಪ್ರಕಾಶಿಸುತ್ತಿದೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾದುದು ಎಂದು ಕೇಂದ್ರ ವಿದೇಶಾಂಗ ಸಚಿವ ಪದ್ಮ ಶ್ರೀ ಡಾ.ಎಸ್.ಜೈಶಂಕರ ಹೇಳಿದರು.

ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನವನ್ನು ಹೊಂದಿತ್ತು ಇಂದು ಆತ್ಮ ನಿರ್ಭರ ಯೋಜನೆಗಳಿಂದ ಐದನೇ ಸ್ಥಾನವನ್ನು ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶವನ್ನು ನೀಡಿದೆ. ಮೋದಿಜಿಯವರು ಕಳೆದ ದಶಕದಿಂದ ದೇಶಕ್ಕೆ ಅದ್ಭುತವಾದ ಯೋಜನೆಗಳನ್ನು ತರುವುದರ ಮೂಲಕ ಭಾರತ ಪ್ರಕಾಶಿಸುವಂತೆ ಮಾಡಿದ್ದಾರೆ. ಅನ್ನಯೋಜನೆ, ಉಜ್ವಲಾ ಯೋಜನೆ, ಆವಾಸ ಯೋಜನೆಗಳಂತಹ ಅಸಂಖ್ಯ ಜನಸಾಮಾನ್ಯರನ್ನೇ ಕೇಂದ್ರವಾಗಿಟ್ಟುಕೊಂಡು ಜಾರಿಗೆ ತಂದ ಯೋಜನೆಗಳು ಭಾರತವನ್ನು ಅಭಿವೃದ್ಧಿಯತ್ತ ಕೊಂಡ್ಯೊದಿದೆ ಎಂದರು.

ಭಾರತವು ಡಿಜಟಲೀಕರಣದಿಂದ ಕ್ಯಾಶ್‌ಲೆಸ್ ದೇಶವಾಗಿ ಜಗತ್ತಿನ ಬಹುದೇಶಗಳನ್ನು ವಿಸ್ಮಯಗೊಳಿಸಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮಲ್ಲಿ ಉತ್ತಮವಾದ ಆಸ್ಪತ್ರೆಗಳು ಇರಲಿಲ್ಲ. ಸೌಲಭ್ಯಗಳು ಇರಲಿಲ್ಲ. ಭಾರತ ಜಾಗತಿಕವಾಗಿ ಕೋವಿಡ್‌ನ್ನು ಎದುರಿಸುವುದು ದುಸ್ತರವೆಂಬುದು ಅನೇಕ ಪ್ರಗತಿಶೀಲದೇಶಗಳ ಅಂಬೋಣವಾಗಿತ್ತು. ಆದರೆ ಭಾರತ ಕೇವಲ ಒಂದುವರ್ಷದ ಅವಧಿಯಲ್ಲಿ ಎಲ್ಲರ ಊಹೆಗಳನ್ನು ಬದಲಾಯಿಸಿತು. ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ ಹೆಮ್ಮೆ ಭಾರತ ದೇಶದ್ದು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಜಿಯವರ ದೂರದೃಷ್ಟಿ ಹಾಗೂ ನಾಯಕತ್ವದ ಗುಣದಿಂದ. ಭಾರತವನ್ನು ವಿದೇಶದವರು ಮೊದಲಿನಂತೇ ನೋಡುವ ದೃಷ್ಟಿಕೋನ ಬದಲಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ೧೭ ಪಾಸ್ಪೋರ್ಟ್‌ಗಳು ಕೇಂದ್ರಗಳು ಇದ್ದವು ಇಂದು ೫೨೭ ಕೇಂದ್ರಗಳಾಗಿವೆ. ಹೊಸ ಅನ್ವೇಷಣೆಗಳು, ಸ್ಟಾರ್ಟಅಪ್‌ಗಳು, ಉದ್ಯೋಗ-ಶೈಕ್ಷಣಿಕ ಹೊಸ ಕೌಶಲಗಳನ್ನು ಹುಟ್ಟುಹಾಕಿ ಭಾರತವನ್ನು ಜಾಗತಿಕವಾಗಿ ೩ನೇ ಶಕ್ತಿಶೀಲ ರಾಷ್ಟ್ರವನ್ನಾಗಿ ರೂಪಿಸುವುದು ಮೋದಿಜಿ ಭಾರತದ ಕನಸಾಗಿದೆ ಎಂದು ಜೈಶಂಕರ ಅವರು ಹೇಳಿದರು.

ಕೆಎಲ್‌ಇ ಸಂಸ್ಥೆ ಅಗಾಧವಾಗಿ ಬೆಳೆದಿದೆ: ಸಂಸ್ಥೆಯು ಶಿಕ್ಷಣ ಆರೋಗ್ಯ ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾಗಿ ಸಾಧನೆ ಮಾಡಿದೆ. ಡಾ.ಪ್ರಭಾಕರ ಕೋರೆಯವರು ಹಾಗೂ ಅವರ ತಂಡದವರು ಚಿಕ್ಕೋಡಿಯನ್ನು ಬದಲಾಯಿಸಿದ್ದಾರೆ. ನಾನು ೪೫ ವರ್ಷ ನಂತರ ಇಲ್ಲಿ ಬಂದಿದ್ದೇನೆ. ಸಂತೋಷವೆನಿಸುತ್ತಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಏನೂ ಇರಲಿಲ್ಲ. ಇಂದು ಚಿಕ್ಕೋಡಿ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳೆದು ನಿಂತಿದೆ. ಇದರ ಹೆಮ್ಮೆ ಮತ್ತೊಂದಿಲ್ಲ. ಕೆಎಲ್‌ಇ ಜಾಗತಿಕವಾಗಿ ಇಂದು ಸಾಕಷ್ಟು ವಿಸ್ತರಿಸಿಕೊಂಡಿದೆ ಅದರ ಹಿಂದೆ ಕೋರೆಯವರ ಕನಸುಗಳು ಇಚ್ಛಾಶಕ್ತಿ ಅದ್ವಿತೀಯವೆಂದು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನಾನು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್‌ಇ ಕಾಲೇಜಿನ ಮೂಲಕ ಪದವಿಯನ್ನು ಪಡೆದು ಬೆಳೆದವನು. ಅಂದರೆ ಕೆಎಲ್‌ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕನ್ನು ಅರಳಿಸಿತು. ಇಂದು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ. ಸಂಸ್ಥೆಯು ಡಾ.ಕೋರೆಯವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು. ಪುಟ್ಟ ಶಾಲೆಯಿಂದ ೧೯೧೬ ರಲ್ಲಿ ಸ್ಥಾಪನೆಗೊಂಡಕೆಎಲ್‌ಇ ಸಂಸ್ಥೆ ಇಂದು ೩೧೦ ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ೧ ಲಕ್ಷ ೪೦ ಸಾವಿರದಷ್ಟು ವಿದ್ಯಾರ್ಥಿಗಳು ಕೆಎಲ್‌ಇ ಶಿಕ್ಷಣಕಾಶಿಯಲ್ಲಿ ಅಧ್ಯಯನದಲ್ಲಿತೊಡಗಿದ್ದಾರೆ. ದಾನಿಗಳು-ಮಹಾದಾನಿಗಳಿಂದ ಬೆಳೆದು ನಿಂತಿರುವ ಕೆಎಲ್‌ಇ ಸಂಸ್ಥೆ ಇಂದು ಜಾಗತಿಕವಾಗಿ ವಿಸ್ತರಿಸಿಕೊಂಡಿದೆ. ಕೆಎಲ್‌ಇ ಸಂಸ್ಥೆಯು ಶಿಕ್ಷಣ-ಆರೋಗ್ಯ-ಸಂಶೋಧನೆಮೂಲಕ ಜಾಗತಿಕವಾಗಿ ವಿಸ್ತರಿಸಿದೆ. ಆಲೋಪತಿ-ಆಯುರ್ವೇದ-ಹೋಮಿಯೋಪಥಿ ಮೂರು ಚಿಕಿತ್ಸೆಗಳ ಮೂಲಕ ೪೫೦೦ ಹಾಸಿಗೆಗಳ ಬೃಹತ್ ಆರೋಗ್ಯಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ ೩೦೦ ಹಾಸಿಗೆಗಳ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಕೆಎಲ್‌ಇ ಒಲಂಪಿಕ್ಸ್ದಲ್ಲಿ ಸಾಧನೆಗೆ ಅಣಿಯಾಗಲಿದೆ ಎಂದರು.

ಚಿಕ್ಕೋಡಿಯಲ್ಲಿ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡವು ಉದ್ಘಾಟನೆಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹರ್ಷತಂದಿದೆ. ಇತಿಹಾಸದಲ್ಲಿ ಇಂದಿನ ದಿನ ಐತಿಹಾಸಿಕ ಹಾಗೂ ಸುವರ್ಣ ದಿನವೆಂದು ನಾನು ಭಾವಿಸಿದ್ದೇನೆ. ಗಡಿ ಭಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿಯೇ ಕೆಎಲ್‌ಇ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಹೆಮ್ಮೆತಂದಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಕೆಎಲ್‌ಇ ನಿರ್ದೇಶಕ ಡಾ.ವಿ.ಎಸ್.ಸಾಧುನವರ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ, ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.

ಡಾ.ಪ್ರಭಾಕರ ಕೋರೆಯವರು ಕೇಂದ್ರ ಸಚಿವ ಡಾ.ಎಸ್.ಜೈ ಶಂಕರ ಅವರಿಗೆ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ನೀಡಿ ಸತ್ಕರಿಸಿದರು. ಶಿಕ್ಷಕಿ ಜಿನಲ್ ಶಹಾ, ಗಂಗಾ ಅರಭಾವಿ ನಿರೂಪಿಸಿದರು. ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.