ಬೆಳಗಾವಿ : ಕಾಗವಾಡ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುರಗುಂಡಿ (ಕಾಗವಾಡ)ದಿಂದ ಗೋಟೂರ ವರೆಗಿನ ಚತುಷ್ಪಥ ರಸ್ತೆಯ ಕಾಮಗಾರಿಗೆ 2615 ಕೋಟಿ ರೂಪಾಯಿಗಳನ್ನು ಕೇಂದ್ರದಿಂದ ಮಂಜೂರು ಮಾಡಿ ಅದರಂತೆ ಶಿರಗುಪ್ಪಿಯಿಂದ ಅಂಕಲಿಯ ಕೃಷ್ಣಾ ಮೇಲ್ಸೇತುವೆ ಕಾಮಗಾರಿಗೂ ಅದೇ ಮಂಜೂರಾತಿಯಲ್ಲಿ 887 ಕೋಟಿ ಹಣವನ್ನು ಮೀಸಲಿಟ್ಟು ಚಾಲನೆ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಮಸ್ತ ಚಿಕ್ಕೋಡಿ ಕಾಗವಾಡ ಭಾಗದ ಜನತೆಯ ಪರಿವಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬೆಳಗಾವಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಬೆಳಗಾವಿ ನಗರದ ರಿಂಗ್ ರಸ್ತೆ ಕಾಮಗಾರಿಯು ಬಹುವರ್ಷಗಳಿಂದ ನೆನಗುದಿಗೆ ಬಿದ್ದಿತ್ತು ಅದಕ್ಕೆ 1622 ಕೋಟಿ ರೂ.ಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಜೂರು ಮಾಡಿದ್ದಾರೆ ಎಂದು ಸ್ಮರಿಸಿದ ಡಾ.ಕೋರೆಯವರು, ಕಾಗವಾಡದಿಂದ ಮೀರಜ್(ಮಹಾರಾಷ್ಟ) ಸಂಪರ್ಕ ಕಲ್ಪಿಸುವ ಸುಮಾರು
17 ಕಿ.ಮೀ.ರಸ್ತೆಯನ್ನು ಉನ್ನತ ದರ್ಜೆಗೆ ಏರಿಸಬೇಕು ಈ ರಸ್ತೆಯು ಮುಂದೆ ಸೊಲ್ಲಾಪುರ-ಲಾತೂರ-ನಾಗಪುರಕ್ಕೆ ಹೋಗಲು ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂದು ವಿನಂತಿಸಿಕೊಂಡಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡಲಾಗುವುದೆಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.