ಬೆಳಗಾವಿ : ಭವಿಷ್ಯದಲ್ಲಿ ಭಾರತ ವಿಶ್ವದ ಎಲ್ಲ ದೇಶಗಳಲ್ಲಿ ಮುಂಚೂಣಿಯ ರಾಷ್ಟ್ರವಾಗಲಿದೆ. ಡಿಜಿಟಲ್ ತಂತ್ರಜ್ಞಾನ ಆವಿಷ್ಕಾರಗಳ ಮೂಲಕ ಭಾರತ ಸಾಕ್ಷಷ್ಟು ಪ್ರಗತಿ ಹೊಂದುತ್ತಿದೆ. ಚಂದ್ರಯಾನ, ಮಂಗಳಯಾನ ಸೇರಿದಂತೆ ಭಾರತ ವಿಭಿನ್ನ ಸಾಧನೆ ತೋರುತ್ತಿದೆ. ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಯಲ್ಲಿ ಭಾರತ ವಿಶ್ವದಲ್ಲಿ ದೇಶ ತನ್ನದೇಯಾದ ಛಾಪು ಮೂಡಿಸಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ (ಮಾ.೦೭) ನಡೆದ ವಿಟಿಯು ೨೩ನೇ ಘಟಿಕೋತ್ಸವ ಭಾಗ -೨ ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ೬೦೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಿಹೆಚ್ ಡಿ ಪದವಿ ಪದಾನ ಮಾಡಲಾಗಿದೆ. ದೇಶ ನಮಗೆ ಎಲ್ಲವನ್ನೂ ಕೊಟ್ಟಿದೆ ಅದರಂತೆ ದೇಶಕ್ಕೆ ನಮ್ಮ ಕೊಡುಗೆಯ ಅಗತ್ಯವಿದೆ. ದೇಶವನ್ನು ಆತ್ಮನಿರ್ಭರ ಹಾಗೂ ಸರ್ವಶ್ರೇಷ್ಠ ಮಾಡಲು ಇಂದಿನ ವಿದ್ಯಾರ್ಥಿಗಳ ಸಹಕಾರ ಅವಶ್ಯಕತೆ ಇದೆ. ಔದ್ಯೋಗಿಕ ಕ್ಷೇತ್ರ ನಮ್ಮ ಕಲ್ಪನೆಗಿಂತಲೂ ಅತಿ ವೇಗವಾಗಿ ಬೆಳೆಯುತ್ತಿದೆ. ಇಂದಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಸುಸ್ಥಿರ ದೇಶಕ್ಕಾಗಿ ನಿಮ್ಮ ಕೊಡುಗೆ ಬೇಕಿದೆ ಎಂದು ತಿಳಿಸಿದರು.


ಪದವಿ ಪಡೆದ ನಂತರ ನೀವು ದೇಶಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಭಾರತ ದೇಶ ಎಲ್ಲ ವಲಯಗಳಲ್ಲಿ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಇತರರಿಗೆ ಪ್ರೇರಣೆಯಾಗಬೇಕು.
ಭವಿಷ್ಯದ ಬಲಿಷ್ಠ ಭಾರತ ನಿರ್ಮಾಣಕ್ಕೆ ನೀವೆಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಸಾಧನೆ ಹೆಚ್ಚು ಒತ್ತು ನೀಡಬೇಕು. ನೀವು ಪಡೆದಂತಹ ಪದವಿ, ಚಿನ್ನದ ಪದಕಕ್ಕೆ ನಿಮ್ಮ ಸಾಧನೆಯ ಮೂಲಕ ಮುಂದಿನ ೧೦ ವರ್ಷಗಳಲ್ಲಿ ಅದರ ಮೌಲ್ಯ ಹೆಚ್ಚಾಗಲಿದೆ. ಅದರಂತೆ ದೇಶದಲ್ಲಿ ಮಹಿಳೆಯರು ಸಹ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಅವರ ಸಾಧನೆಗಳಿಗೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಪದವಿ ಬಳಿಕ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೇ ಕಲಿತ ಜ್ಞಾನದಿಂದ ಬಡ ಮತ್ತು ಮದ್ಯಮ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಸೇರುವುದಕ್ಕಿಂತ ಸ್ವಯಂ ಉದ್ಯೋಗ ಸೃಷ್ಟಿಯ ಮೂಲಕ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಬೇಕು ಎಂದು ರಾಮನ್ಸ್ ಮ್ಯಾಗ್ನಸೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಸೆಲ್ಕೋ ಪೌಂಡೇಶನ್ ಹಾಗೂ ಸೆಲ್ಕೋ ಇಂಡಿಯಾ ಸಹ ಸಂಸ್ಥಾಪಕ ಡಾ. ಹರೀಶ ಹಂದೆ ಅವರು ಹೇಳಿದರು.
ಕಳೆದ 25 ವರ್ಷಗಳಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದಲ್ಲಿ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ಈಗ ಉನ್ನತ ಉದ್ಯೋಗದಲ್ಲಿದ್ದಾರೆ. ಕಲಿಕೆ ಪದವಿಗಳಿಕೆಗೆ ಸೀಮಿತವಾಗದೇ, ಪದವಿ ಪಡೆದ ಬಳಿಕವೂ ಪ್ರತಿ ದಿನ ಹೊಸತನ್ನು ಕಲಿಯುತ್ತಾ ಇರಬೇಕು. ನಿರಂತರ ಕಲಿಕೆಯಿಂದ ಮಾತ್ರ ಹೊಸ ಆವಿಷ್ಕಾರಗಳು ಸಾಧ್ಯ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ ಸಿ ಸುಧಾಕರ ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಟಿ.ಎನ್ ಶ್ರೀನಿವಾಸ ಉಪಸ್ಥಿತರಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ:
ಇದಕ್ಕೂ ಮುಂಚೆ ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ೪ ಚಿನ್ನದ ಪದಕ, ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷತಾ ನಾಯ್ಕ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಪೂಜಾ ತಲಾ ೩ ಚಿನ್ನದ ಪದಕ, ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರಾಂತಿ ಮೋರೆ, ಚಿಕ್ಕಮಗಳೂರಿನ ಆದಿಚುಂಚನ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಪಿ.ಚೇತನ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎ.ಎಸ್.ನಿತ್ಯಾ ತಲಾ ೨ ಚಿನ್ನದ ಪದಕ ವಿತರಿಸಲಾಯಿತು.
ಘಟಿಕೋತ್ಸವದಲ್ಲಿ ಒಟ್ಟು ೪,೫೧೪ ಎಂಬಿಎ, ೪,೦೨೪ ಎಂಸಿಎ, ೯೨೦ ಎಂ.ಟೆಕ್, ೪೪ ಎಂ.ಆರ್ಚ್, ೨೭ ಎಂ.ಪ್ಲ್ಯಾನ್ ಪದವಿ ನೀಡಲಾಗುವುದು. ಪಿಎಚ್.ಡಿ–೬೬೭, ಎಂ.ಎಸ್ಸಿ ಎಂಜಿನಿಯರಿಂಗ್ ಬೈ ರಿಸರ್ಚ್–೨, ಇಂಟಿಗ್ರೇಟೆಡ್ ಡ್ಯುಯೆಲ್ ಡಿಗ್ರಿ ಟು ರಿಸರ್ಚ್–೨ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು.