ನವದೆಹಲಿ: ಕೇರಳದ ವಯನಾಡು ದುರಂತದ ನಂತರ, ಪಶ್ಚಿಮ ಘಟ್ಟಗಳ ಸುಮಾರು 57,000 ಚದರ ಕಿಲೋಮೀಟರ್ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಕೇಂದ್ರ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಪಶ್ಚಿಮ ಘಟ್ಟ ಪ್ರದೇಶದ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.

ಇದು ಸುಮಾರು 36%ರಷ್ಟು ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಪ್ರಸ್ತಾಪಿಸಿದೆ. ಕೇಂದ್ರಕ್ಕೆ ತಮ್ಮ ಅಭಿಪ್ರಾಯಗಳನ್ನು ನೀಡಲು ನಾಗರಿಕರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ, ನಂತರ ಅಂತಿಮ ಅಧಿಸೂಚನೆಯನ್ನು ರಾಜ್ಯವಾರು ಅಥವಾ ಸಂಯೋಜಿತ ಆದೇಶವನ್ನು ಪ್ರಕಟಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಗುಜರಾತ್ – ಆರು ರಾಜ್ಯಗಳಲ್ಲಿ 56,826 ಚದರ ಕಿ.ಮೀ ಪ್ರದೇಶವನ್ನು ‘ಪರಿಸರ ಸೂಕ್ಷ್ಮ’ ಎಂದು ಘೋಷಿಸಲು ಉದ್ದೇಶಿಸಲಾಗಿದೆ, ಇಲ್ಲಿ ವಾಣಿಜ್ಯ ಚಟುವಟಿಕೆಯ ಮೇಲೆ ಹಲವಾರು ನಿರ್ಬಂಧಗಳನ್ನು ತರುತ್ತದೆ. ಇದು ವಯನಾಡಿನ 13 ಗ್ರಾಮಗಳು ಸೇರಿದಂತೆ ಕೇರಳದ 9,994 ಚದರ ಕಿ.ಮೀ.ಪ್ರದೇಶವನ್ನು ಒಳಗೊಂಡಿದೆ.

ಕೇಂದ್ರದಿಂದ ಕರಡು ಅಧಿಸೂಚನೆ ಹೊರಡಿಸಿರುವುದು ಇದು ಆರನೇ ಬಾರಿ. ಕೊನೆಯ ಕರಡ ಅಧಿಸೂಚನೆಯನ್ನು ಜುಲೈ 2022 ರಲ್ಲಿ ಹೊರಡಿಸಲಾಗಿತ್ತು. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಅಧಿಸೂಚನೆಯನ್ನು ಅಂತಿಮಗೊಳಿಸಲು ಸಮಿತಿಯನ್ನು ಸಹ ರಚಿಸಲಾಯಿತು.
ಅತಿರೇಕದ ವ್ಯಾಪಾರೀಕರಣ ಮತ್ತು ‘ಪರಿಸರ ಸೂಕ್ಷ್ಮ ಪ್ರದೇಶ’ ಟ್ಯಾಗ್ ಇಲ್ಲದಿರುವುದು ವಯನಾಡು ದುರಂತದ ಹಿಂದಿನ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ, ಇದರಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರದ ಕರಡು ಅಧಿಸೂಚನೆಯ ಪ್ರಕಾರ ವಯನಾಡಿನಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಉದ್ದೇಶಿಸಿರುವ ಗ್ರಾಮಗಳೆಂದರೆ ಪೆರಿಯ, ತಿರುನೆಲ್ಲಿ, ತೊಂಡರ್‌ನಾಡ್, ತ್ರಿಸಿಲೇರಿ, ಕಿಡಂಗನಾಡ್, ನೂಲ್‌ಪುಳ, ಅಚೂರಾನಂ, ಚುಂಡೇಲ್, ಕೊಟ್ಟಪ್ಪಾಡಿ, ಕುನ್ನತ್ತಿದವಕ, ಪೊಝುತಾನ, ತಾರಿಯೋಡ್ ಮತ್ತು ವೆಳ್ಳರಿಮಲ ಗ್ರಾಮಗಳಾಗಿವೆ.
ಆರು ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆಯು 2013 ರಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಗಣಿಗಾರಿಕೆ (ಈಗಿರುವ ಗಣಿಗಳನ್ನು ಐದು ವರ್ಷಗಳಲ್ಲಿ ಹಂತಹಂತವಾಗಿ ತೆಗೆದುಹಾಕಲಾಗುವುದು), ಹೊಸ ಉಷ್ಣ ಸ್ಥಾವರಗಳು, ‘ಕೆಂಪು ವರ್ಗ’ದ ಕೈಗಾರಿಕೆಗಳು ಮತ್ತು ಕಟ್ಟಡ ಮತ್ತು ನಿರ್ಮಾಣದ ಎಲ್ಲಾ ಹೊಸ ಮತ್ತು ವಿಸ್ತರಣಾ ಯೋಜನೆಗಳನ್ನು ‘ಪರಿಸರ-ಸೂಕ್ಷ್ಮ ಪ್ರದೇಶ’ದಲ್ಲಿ ನಿಷೇಧಿಸಲು ಶಿಫಾರಸು ಮಾಡಲಾಗಿದೆ.

ಪಶ್ಚಿಮ ಘಟ್ಟಗಳ ಪ್ರಾಮುಖ್ಯತೆ
ಪಶ್ಚಿಮ ಘಟ್ಟಗಳು ಭಾರತದ ಪಶ್ಚಿಮ ಕರಾವಳಿಯ ಅಂಚಿನಲ್ಲಿರುವ ಪ್ರಮುಖ ಭೂವೈಜ್ಞಾನಿಕ ಭೂಪ್ರದೇಶವಾಗಿದೆ ಮತ್ತು ಗೋದಾವರಿ, ಕೃಷ್ಣ, ಕಾವೇರಿ ಸೇರಿದಂತೆ ಹಲವಾರು ಇತರ ನದಿಗಳ ಮೂಲವಾಗಿದೆ. ಘಟ್ಟಗಳು ಉತ್ತರದಲ್ಲಿ ತಪತಿ ನದಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಸರಿಸುಮಾರು 1500 ಕಿ.ಮೀ ದೂರದಲ್ಲಿ ಸರಾಸರಿ 600 ಮೀ ಗಿಂತ ಹೆಚ್ಚು ಎತ್ತರವನ್ನು ಹೊಂದಿದೆ ಮತ್ತು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಎಂಬ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಮತ್ತಷ್ಟು ಅವನತಿಯನ್ನು ತಡೆಗಟ್ಟಲು ಮುಂದಿನ ಮಾರ್ಗವನ್ನು ಕಂಡುಹಿಡಿಯಲು ಯುಪಿಎ ಅಧಿಕಾರಾವಧಿಯಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲಾಯಿತು ಎಂದು ದಾಖಲೆ ಹೇಳುತ್ತದೆ.
ಉನ್ನತ ಮಟ್ಟದ ವರ್ಕಿಂಗ್ ಗ್ರೂಪ್ ತನ್ನ ವರದಿಯನ್ನು ಏಪ್ರಿಲ್ 15, 2013 ರಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು, ವರದಿಯ ಬಗ್ಗೆ ಪರಿಗಣಿಸಲಾದ ಅಭಿಪ್ರಾಯಗಳಿಗಾಗಿ ಆರು ರಾಜ್ಯಗಳಿಗೆ ಕಳುಹಿಸಲಾಗಿದೆ. ಗ್ರೂಪ್ ಸುಮಾರು 37% ರಷ್ಟು ಪಶ್ಚಿಮ ಘಟ್ಟಗಳ ಪ್ರದೇಶವನ್ನು ಸೂಕ್ಷ್ಮ ಎಂದು ಗುರುತಿಸಿದೆ, ಇದು ಪಶ್ಚಿಮ ಘಟ್ಟಗಳ ನೈಸರ್ಗಿಕ ಪ್ರದೇಶದ 59,940 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡಿದೆ.
ಈ ಸಮಿತಿಯ ಶಿಫಾರಸಿಗಿಂತ 3,114 ಚ.ಕಿ.ಮೀನಷ್ಟು ಕಡಿಮೆ ಭೂ ಪ್ರದೇಶವನ್ನು ಈಗ ಕೇಂದ್ರ ಸರ್ಕಾರವು ಹೊರಡಿಸಿದ ಹೊಸ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಆದರೆ, ಅದರ ಅಂತಿಮಗೊಳಿಸುವಿಕೆಯು ಪಶ್ಟಿಮ ಘಟ್ಟವನ್ನು ಹೊಂದಿರುವ ​​ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ.

ರಾಜ್ಯ ಹಾಗೂ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿ
ರಾಜ್ಯ ಪರಿಸರ ಸೂಕ್ಷ್ಮ ಪ್ರದೇಶದ ವಿಸ್ತೀರ್ಣ
ಕರ್ನಾಟಕ 20,668 ಚದರ ಕಿ.ಮೀ.
ಮಹಾರಾಷ್ಟ್ರ 17,340 ಚದರ ಕಿ.ಮೀ.
ಕೇರಳ 9,993 ಚದರ ಕಿ.ಮೀ.
ತಮಿಳುನಾಡು 6,914 ಚದರ ಕಿ.ಮೀ.
ಗೋವಾ 1,461 ಚದರ ಕಿ.ಮೀ.
ಗುಜರಾತ್‌ 449 ಚದರ ಕಿ.ಮೀ.

ಉನ್ನತ ಮಟ್ಟದ ವರ್ಕಿಂಗ್ ಗ್ರೂಪ್ ಶಿಫಾರಸು ಮಾಡಿದ 13,108 ಚದರ ಕಿಮೀಗೆ ಹೋಲಿಸಿದರೆ ಕೇರಳ ಸರ್ಕಾರವು ಶಿಫಾರಸು ಮಾಡಿದ ಪರಿಸರ ಸೂಕ್ಷ್ಮ ಪ್ರದೇಶವು 9,993.7 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ, ಇದರಲ್ಲಿ 9,107 ಚದರ ಕಿಮೀ ಅರಣ್ಯ ಪ್ರದೇಶ ಮತ್ತು 886.7 ಚದರ ಕಿಮೀ ಅರಣ್ಯೇತರ ಪ್ರದೇಶವನ್ನು ಒಳಗೊಂಡಿದೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಗೆ ಸಂಪೂರ್ಣ ನಿಷೇಧವಿರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಗಣಿಗಳನ್ನು ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅಥವಾ ಅಸ್ತಿತ್ವದಲ್ಲಿರುವ ಗಣಿಗಾರಿಕೆ ಗುತ್ತಿಗೆಯ ಅವಧಿ ಮುಗಿದ ಐದು ವರ್ಷಗಳೊಳಗೆ ಹಂತಹಂತವಾಗಿ ಸ್ಥಗಿತಗೊಳಿಸಲಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳು ಮತ್ತು ಅಸ್ತಿತ್ವದಲ್ಲಿರುವ ಸ್ಥಾವರಗಳ ವಿಸ್ತರಣೆಯನ್ನು ಅನುಮತಿಸಲಾಗುವುದಿಲ್ಲ.
ಕೇಂದ್ರ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ‘ಕೆಂಪು’ ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿರುವ ಕೈಗಾರಿಕೆಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ವಿಸ್ತರಣೆಯನ್ನು ನಿಷೇಧಿಸಲಾಗಿದೆ. ಆರೋಗ್ಯ ರಕ್ಷಣಾ ಸಂಸ್ಥೆಗಳೂ ಸೇರಿದಂತೆ ಅಸ್ತಿತ್ವದಲ್ಲಿರುವ ‘ಕೆಂಪು’ ಪಟ್ಟಿಯ ಎಲ್ಲ ಕೈಗಾರಿಕೆಗಳ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗಿದೆ.
20,000 ಚ.ಮೀ ವಿಸ್ತೀರ್ಣಕ್ಕೂ ಹೆಚ್ಚಿನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ಯೋಜನೆಗಳು, 50 ಹೆಕ್ಟೇರ್‌ ಅಥವಾ 1,50,000 ಚ.ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಟೌನ್‌ಶಿಪ್‌ ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈಗಾಗಲೇ ಇರುವ ವಸತಿಗಳ ದುರಸ್ತಿ, ವಿಸ್ತರಣೆ, ನವೀಕರಣಕ್ಕೆ ನಿರ್ಬಂಧವಿಲ್ಲ.