ನವದೆಹಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ನೀಡಿರುವ ಜನಾಂಗೀಯ ಹೇಳಿಕೆಗೆ ಸಂಬಂಧಿಸಿ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಭಾರತದ ವೈವಿಧ್ಯತೆಯನ್ನು ವಿವರಿಸುವ ಸಂದರ್ಭದಲ್ಲಿ ಸ್ಯಾಮ್ ಪಿತ್ರೋಡಾ ಅವರು ಜನಾಂಗೀಯ ಹೇಳಿಕೆಗಳನ್ನು ನೀಡಿರುವುದು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಅವರ (ಪಿತ್ರೋಡಾ) ಹೇಳಿಕೆಯಿಂದ ಕಾಂಗ್ರೆಸ್‌ ಸಂಪೂರ್ಣವಾಗಿ ದೂರವಿರುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಿತ್ರೋಡಾ ಹೇಳಿದ್ದಾದರೂ ಏನು ?
ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದ ಜನರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸೋದರ-ಸೋದರಿಯರಂತೆ ಜೀವಿಸುತ್ತಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ಪಿತ್ರೋಡಾ ಹೇಳಿದ್ದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿಗೆ ಅದ್ಭುತ ಉದಾಹರಣೆಯಾಗಿದೆ. ದೇಶದ ಜನರು ವಿವಿಧ ಭಾಷೆ, ಆಹಾರ ಪದ್ಧತಿಯನ್ನು ಗೌರವಿಸುತ್ತಾರೆ. ಇದು ನಾನು ನಂಬುವ ಭಾರತವಾಗಿದೆ. ಇಲ್ಲಿ ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳುತ್ತಾರೆ ಎಂದು ಪಿತ್ರೋಡಾ ತಿಳಿಸಿದ್ದಾರೆ.

ಭಾರತದ ಕಲ್ಪನೆಯು ಪ್ರಜಾಪ್ರಭುತ್ವ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿತ್ತು. ಆದರೆ, ಈಗ ‘ರಾಮ ನವಮಿ’, ‘ರಾಮ ಮಂದಿರ’ದಿಂದ ಸವಾಲನ್ನು ಎದುರಿಸುತ್ತಿದೆ. ಸದಾಕಾಲ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೆ, ಬಿಜೆಪಿಯವರಂತೆಯೇ ಮಾತನಾಡುತ್ತಾರೆ’ ಎಂದು ಪಿತ್ರೋಡಾ ಪ್ರತಿಪಾದಿಸಿದ್ದಾರೆ.